ಚಿಕ್ಕಮಗಳೂರು: ಈತ ಮಾನಸಿಕ ಅಸ್ವಸ್ಥನೋ ಅಥವ ಕುಟುಂಬಸ್ಥರ ಮೇಲೆ ಈತನಿಗೆ ರಚ್ಚೋ ಗೊತ್ತಿಲ್ಲ. ಕೂಲಿಗೆ ಹೋದವರು ಹಿಂದಿರುಗಿ ಮನೆಗೆ ಬಂದ ಕೂಡಲೇ ಮಚ್ಚಿನಿಂದ ಮನಬಂದಂತೆ ಬೀಸಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗುಡ್ಡೆತೋಟದ ರವಿ ಎಂಬುವನೆ ಮಚ್ಚಿನಿಂದ ಮನ ಬಂದಂತೆ ತಾಯಿ, ಪತ್ನಿ, ಮಗಳು, ಅತ್ತಿಗೆ ಹಾಗೂ ಪಕ್ಕದ ಮನೆ ಮಹಿಳೆ ಮೇಲೂ ಮಚ್ಚು ಬೀಸಿದ ವ್ಯಕ್ತಿ. ಕೂಡಲೇ ಇವನನ್ನ ಸ್ಥಳಿಯರು ಹಿಡಿದುಕೊಂಡು ಜಯಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ವರ್ತನೆ ನೋಡಿ ಪೊಲೀಸರು ಆತನಿಗೆ ಚಿಕಿತ್ಸೆ ಕೊಡಿಸಿದ ಮೇಲೆ ಸ್ವಲ್ಪ ಹೊತ್ತಿನ ಬಳಿಕ ನನ್ನನ್ನ ಇಲ್ಲಿಗೆ ಯಾಕೆ ಕರೆದುಕೊಂಡು ಬಂದಿದ್ದಾರೆ… ನನಗೆ ಏನಾಗಿದೆ… ನಾನು ಚೆನ್ನಾಗಿದ್ದೇನೆ ಎಂದು ಪೊಲೀಸರ ಮೇಲೂ ಕೂಗಾಡಿದ್ದಾನೆ. ಚಿಕಿತ್ಸೆ ನೀಡಿ ಅರ್ಧ ಗಂಟೆಯಾಗುವಷ್ಟರಲ್ಲಿ ಮತ್ತೆ ಮಾನಸಿಕ ಸ್ಥಿಮಿತತೆ ಕಳೆದುಕೊಂಡವನಂತೆ ವರ್ತಿಸಿದ್ದಾನೆ. ಮನೆಯವರ ಮೇಲೆಲ್ಲಾ ಮಚ್ಚು ಬೀಸಿದ ಈತ ತನ್ನ ತುಟಿಗಳನ್ನ ತಾನೇ ರಕ್ತ ಬರುವಂತೆ ಕಡಿದುಕೊಂಡು ಕೂಗಾಡಿದ್ದಾನೆ. ಇದನ್ನೆಲ್ಲಾ ಗಮನಿಸಿದ ಪೊಲೀಸರು ಈತನಿಗೆ ಮಾನಸಿಕ ಕಾಯಿಲೆ ಇರಬಹುದೆಂದು ಹೆಚ್ಚಿನ ಚಿಕಿತ್ಸೆ ಕೊಡಿಸುತ್ತಿದ್ದಾರೆ.