ಹೊಸದಿಲ್ಲಿ: ದೇಶದ ಅರ್ಥ ವ್ಯವಸ್ಥೆಯ ಗತಿ, ಚಿಂತನೆ ಬದಲಾಗಿದೆ. ಹೊಸ ರೀತಿಯ ಆದಾಯ ಹೊಂದುತ್ತಿರುವ ವರ್ಗದವರು ಸೃಷ್ಟಿಯಾಗಿದ್ದಾರೆ. ಅದಕ್ಕೆ ಪೂರಕವಾಗಿ ಉಂಟಾಗುವ ವಿವಾದಗಳ ಪರಿಹಾರಕ್ಕೆ ಹಾಲಿ ಇರುವ ಆದಾಯ ತೆರಿಗೆ ಕಾನೂನುಗಳು ಸಾಕಾಗುವುದಿಲ್ಲ. ಅದನ್ನು ಬದಲು ಮಾಡುವ ಮತ್ತೂಂದು ಸವಾಲಿನ ಕೆಲಸಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಕೈ ಹಾಕಿದೆ. ಹೀಗಾಗಿ ಆದಾಯ ತೆರಿಗೆಗೆ ಸಂಬಂಧಿಸಿದ ಹೊಸ ಕಾನೂನು ಹೇಗಿರಬೇಕು ಎಂದು ಪರಿಶೀಲನೆ ನಡೆಸಲು ಆರು ಮಂದಿ ಸದಸ್ಯರಿರುವ ಕಾರ್ಯ ಪಡೆಯೊಂದನ್ನು ರಚಿಸಲಾಗಿದೆ.
ಕಪ್ಪುಹಣ ವಿರುದ್ಧ ಹೋರಾಟ ನಡೆಸಲು ನೋಟು ಅಮಾನ್ಯ, ಪರೋಕ್ಷ ತೆರಿಗೆ ಮತ್ತು ಹಲವು ಹಂತದ ತೆರಿಗೆ ವ್ಯವಸ್ಥೆಯಿಂದ ದೇಶದ ವ್ಯವಸ್ಥೆಯನ್ನು ಸರಳೀಕರಿಸುವ ನಿಟ್ಟಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಷ್ಠಾನ ಗೊಳಿಸಿದ ಬಳಿಕ ಈ ಕ್ರಮಕ್ಕೆ ಮುಂದಾಗಿದೆ.
ಸೆಪ್ಟಂಬರ್ನಲ್ಲಿ ಹೊಸದಿಲ್ಲಿಯಲ್ಲಿ ಆಯೋ ಜಿಸಲಾಗಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, “1961ರಲ್ಲಿ ಆದಾಯ ತೆರಿಗೆ ಕಾಯ್ದೆ ರಚನೆ ಮಾಡಲಾಗಿದೆ. 50 ವರ್ಷಗಳ ಹಿಂದಿನ ಕಾನೂನನ್ನು ಪುನಾರಚಿಸಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದರು. ಅದಕ್ಕೆ ಪೂರಕವಾಗಿ ಪರಿಶೀಲನೆ ನಡೆಸಲು ಕಾರ್ಯ ಪಡೆ ರಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಬುಧವಾರ ತಿಳಿಸಿದೆ