ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಮತ್ತೆ ಕಂಪಿಸಿದ ಭೂಮಿ…

1195
firstsuddi

ಚಿಕ್ಕಮಗಳೂರು: ಮಲೆನಾಡಲ್ಲಿ ಮಳೆ ಬರುವಾಗ ಆದ ಅನಾಹುತಕ್ಕಿಂತ ಮಳೆ ನಿಂತ ಮೇಲೆ ಆಗ್ತಿರೋ ಅನಾಹುತಗಳೇ ಹೆಚ್ಚಾಗಿವೆ. ಎರಡು ತಿಂಗಳ ನಿರಂತರ ಮಳೆಯ ಬಳಿಕ ಮಲೆನಾಡಿನಲ್ಲಿ ಕೆಲವಡೆ ಭೂಮಿ ಕುಸಿಯುತ್ತಿದ್ರೆ, ಮತ್ತೆ ಹಲವೆಡೆ ಭೂಮಿ ಬಾಯ್ಬಿಡ್ತಿದೆ. ಇದರಿಂದ ಮಲೆನಾಡಿನ ಜನ ಬದುಕಿನ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಮೂರ್ನಾಲ್ಕು ದಶಕದ ಬಳಿಕ ಸುರಿದ ಭಾರೀ ಮಳೆಯಿಂದ ಕಂಗೆಟ್ಟಿದ್ದ ಮಲೆನಾಡಿಗರೀಗ ಭೂಕಂಪದ ಭಯದಲ್ಲಿದ್ದಾರೆ. ಆಗಾಗ ಭೂಮಿಯೊಳಗಿಂದ ಕೇಳಿ ಬರ್ತೀರೋ ಭಾರೀ ಸದ್ದಿನಿಂದ ಆತಂಕ್ಕೀಡಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕೊಗ್ರೆ ಸಮೀಪದ ಮೇಗುಂದ ಹೋಬಳಿಯ, ಅತ್ತಿಕೂಡಿಗೆ, ಕೊಗ್ರೆ, ಸೋಮೇಶ್ವರ್ ಖಾನ್ ಎಸ್ಟೇಟ್, ಬೈರೇದೇವರು, ಬೆತ್ತದಕೊಳಲು ಗ್ರಾಮಗಳ ಸುತ್ತಮುತ್ತ ಭೂಮಿಯೊಳಗಿನಿಂದ ಭಾರೀ ಸುದ್ದು ಕೇಳಿ ಬರುತ್ತಿದ್ದು, ಜನ ಭಯದಲ್ಲಿ ಬದುಕುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ 11.30ರ ಸುಮಾರಿಗೆ ಭೂಮಿಯೊಳಗೆ ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಮಲೆನಾಡಿಗರು ತೀವ್ರ ಆತಂಕಕ್ಕೀಡಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದಲೂ ಈ ರೀತಿ ಶಬ್ಧ ಬರುತ್ತಿದ್ದು, ವಾರದಲ್ಲಿ ಒಂದೆರಡು ಬಾರಿ ಬರುತ್ತಿರೋದ್ರಿಂದ ಜನ ಮನೆಯ ಸಾಮಾನುಗಳನ್ನ ಹೊರಗಿಟ್ಟ ಉದಾಹರಣೆಯೂ ಇದೆ. ಈ ಬಗ್ಗೆ ಸ್ಥಳಕ್ಕೆ ಬಂದಿದ್ದ ಭೂವಿಜ್ಞಾನ ಅಧಿಕಾರಿಗಲು ಭೂಮಿಯೊಳಗೆ ಬಂಡೆಗಳು ಜಾರುವುದರಿಂದ ಈ ರೀತಿ ಶಬ್ಧ ಬರುತ್ತಿದೆ, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ರು. ಆದ್ರೆ, ಪ್ರಕೃತಿಯ ವಿಚಿತ್ರ ಏನೋ ಎಂದು ಜೀವದ ಬಗ್ಗೆ ಮಲೆನಾಡಿಗರು ಭಯದಲ್ಲೇ ಬದುಕುತ್ತಿದ್ದಾರೆ.