ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ ಒಂದೂವರೆ ವರ್ಷ ಕಳೆದಿದೆ. ದಿನಗಳು ಉರುಳುತ್ತಿದ್ದರೂ ಆ ಪರಮಾತ್ಮನ ನೆನಪು ಅಭಿಮಾನಿಗಳ ಮನದಲ್ಲಿ ಜೀವಂತವಾಗಿದೆ. ಅಪ್ಪು ಇಂದು ನಮ್ಮೊಂದಿಗಿದ್ದಿದ್ದರೆ 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಧಿಯಾಟದಿಂದಾಗಿ ಅವರು ನಮ್ಮೊಂದಿಗಿಲ್ಲ. ಅಪ್ಪು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ ಸಂಭ್ರಮಕ್ಕೇನೂ ಕೊರತೆ ಕಾಣುತ್ತಿಲ್ಲ. ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ರಾಜ್ ಕುಮಾರ್ ಕುಟುಂಬ ಆಗಮಿಸಿ, ಪೂಜೆ ಸಲ್ಲಿಕೆ ಮಾಡಲಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಕುಟುಂಬದ ಅನೇಕರು ಕಂಠೀರವ ಸ್ಟುಡಿಯೋಗೆ ಬಂದು ಪೂಜೆಯಲ್ಲಿ ಭಾಗಿ ಆಗಲಿದ್ದಾರೆ. ರಾಜ್ಯದ ನಾನಾ ಕಡೆಗಳಲ್ಲಿ ಅಪ್ಪು ಪುತ್ಥಳಿ ಅನಾವರಣ, ಅನ್ನ ಸಂತರ್ಪಣೆ, ಅನಾಥಾಶ್ರಮದಲ್ಲಿ ಹುಟ್ಟುಹಬ್ಬ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಲ್ಲದೇ, ಪುನೀತ್ ಅವರ ಹುಟ್ಟು ಹಬ್ಬದ ದಿನದಂದೆ ಆರ್.ಚಂದ್ರು ನಿರ್ದೇಶನದ ಉಪೇಂದ್ರ, ಸುದೀಪ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಕಬ್ಜ ಚಿತ್ರ ರಿಲೀಸ್ ಆಗಿದೆ.










