ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ನಯನತಾರ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ನಿನ್ನೆ ಆಂದ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಯನತಾರ ಪಾದರಕ್ಷೆ ಧರಿಸಿ ತಿರುಮಲ ದೇವಸ್ಥಾನದ ಆವರಣದಲ್ಲಿ ಸಂಚರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಯನತಾರಾ ದೇವಸ್ಥಾನದ ಆವರಣದ ಒಳಗೆ ಚಪ್ಪಲಿ ಧರಿಸಿದ್ದರು ಎನ್ನುವುದೇ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.
ನಯನತಾರ ಮೇಲೆ ಕೇಳಿ ಬಂದ ಗಂಭೀರ ಆರೋಪದ ಬಗ್ಗೆ ಟಿಟಿಡಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಘಟನೆ ಕುರಿತು ವಿಜಿಲೆನ್ಸ್ ಅಧಿಕಾರಿ ಬಾಲರೆಡ್ಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ನಟಿ ನಯನತಾರ ಪಾದರಕ್ಷೆ ಧರಿಸಿ ಬಂದಿರುವುದು ದುರದೃಷ್ಟಕರ. ದೇವಸ್ಥಾನದ ಮುಂದೆ ಫೋಟೋ ಶೂಟ್ ಮಾಡುತ್ತಿರುವುದು ನಿಯಮಗಳಿಗೆ ವಿರುದ್ಧವಾಗಿದೆ. ನ್ಯಾಯಶಾಸ್ತ್ರಜ್ಞರ ಸಲಹೆ ಮೇರೆಗೆ ನಯನತಾರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನು, ಘಟನೆಗೆ ಸಂಬಂಧಿಸಿದಂತೆ ನಯನತಾರಾ ಪತಿ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಪ್ರತಿಕ್ರಿಯಿಸಿದ್ದಾರೆ. ಮದುವೆಯಾದ ಬಳಿಕ ನಾವು ಮನೆಗೆ ಹೋಗದೆ ನೇರವಾಗಿ ತಿರುಪತಿಗೆ ಭೇಟಿ ನೀಡಿದ್ದೇವೆ. ಈ ಸನ್ನಿವೇಶ ನೆನಪಿನಾರ್ಥಕ್ಕೆ ದೇವಸ್ಥಾನದ ಹೊರಗೆ ಫೋಟೋ ತೆಗೆಸಿಕೊಂಡಿದ್ದೇವೆ.ಹೆಚ್ಚು ನೂಕುನುಗ್ಗಲು ಇದ್ದಿದ್ದರಿಂದ ಅಲ್ಲಿಂದ ನಾವು ಹೊರಟು ಹೋದೆವು. ಬಳಿಕ ಮತ್ತೆ ಫೋಟೋ ತೆಗೆಯಲು ಬಂದಾಗ ಚಪ್ಪಲಿ ಧರಿಸಿರುವುದು ಗೊತ್ತಾಗಲಿಲ್ಲ. ಚಪ್ಪಲಿ ಧರಿಸುವ ಮೂಲಕ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಅವರು ಪ್ರೀತಿಸುವ ಭಗವಂತನಿಗೆ ಯಾವುದೇ ಅಗೌರವ ಉಂಟುಮಾಡುವ ಉದ್ದೇಶವಿಲ್ಲ ಎಂದು ಅವರು ಪತ್ರ ಬರೆಯುವ ಮೂಲಕ ಕ್ಷಮೆಯಾಚಿಸಿದ್ದಾರೆ.










