ಬೆಂಗಳೂರು : ಹೌದು ಹುಲಿಯಾ ಎಂಬ ಡೈಲಾಗ್ ಮೂಲಕ ಸುದ್ದಿಯಾಗಿದ್ದ ಪೀರಪ್ಪ ಕಟ್ಟಿಮನಿ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಉಪಚುನಾವಣೆಯ ವೇಳೆ ಸಿದ್ದರಾಮಯ್ಯ ಅವರು ಕಾಗಾವಾಡ ಕಾಂಗ್ರೆಸ್ ಅಭ್ಯರ್ಥಿಯ ಪರ ಚುನಾವಣಾ ಪ್ರಚಾರದ ಭಾಷಣ ಮಾಡುತ್ತಿದ್ದ ವೇಳೆ ವೇದಿಕೆ ಮುಂದೆ ಕುಳಿತಿದ್ದ ಪಕೀರಪ್ಪ ಅವರು ಹೌದು ಹುಲಿಯಾ ಎಂದು ಜೋರಾಗಿ ಕೂಗಿದ್ದರು. ಅಲ್ಲದೇ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದಾದ ಬಳಿಕ ಪೀರಪ್ಪ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದು, ಈ ವೇಳೆ ಪೀರಪ್ಪ ಅವರು ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದ್ದಾರೆ.
ಪೀರಪ್ಪ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಈ ಕುರಿತು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಕಾಗವಾಡದಲ್ಲಿ ನನ್ನ ಭಾಷಣದ ವೇಳೆ “ಹೌದೋ ಹುಲಿಯಾ” ಅಂತ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟೀಮನಿ. ಅಷ್ಟೇ ಪ್ರೀತಿಯಿಂದ ಇಂದು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ಇಂಥ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಈತನೇ ನಿಜವಾದ ‘ಹುಲಿಯಾ’. ಎಂದು ಟ್ವೀಟ್ ಮಾಡಿದ್ದಾರೆ.











