ಕಲಬುರಗಿ : ಮಹಿಳೆಯನ್ನು ಕೊಲೆ ಮಾಡಿರುವ ವಿಷಯ ಪೊಲೀಸರಿಗೆ ತಿಳಿಯಿತು ಎಂದು ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸ್ಟೇಶನ್ ಗಾಣಗಾಪುರ ಗ್ರಾಮದಲ್ಲಿ ನಡೆದಿದೆ. ಪೋಸಯ್ಯ ಕಲ್ಯಾಣಕರ್(28) ಆತ್ಮಹತ್ಯೆ ಮಾಡಿಕೊಂಡ ಆರೋಪಿ ಎನ್ನಲಾಗಿದ್ದು, ಪೋಸಯ್ಯ ಅವರು ನಿನ್ನೆ ಮಧ್ಯಾಹ್ನ ಚಿನ್ನ ಹಾಗೂ ಹಣದ ಆಸೆಗೆ ನೀಲೂರು ಗ್ರಾಮದ ನಿವಾಸಿ ಲಕ್ಷ್ಮಿಬಾಯಿ ಹೂಗಾರ್(40) ಎಂಬ ಮಹಿಳೆಯನ್ನು ಕೊಲೆ ಮಾಡಿ ಮಹಿಳೆ ಬಳಿ ಇದ್ದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದನು. ಈ ವಿಷಯ ತಿಳಿದ ಪೊಲೀಸರು ಆರೋಪಿಯನ್ನು ಹುಡುಕಿಕೊಂಡು ಸ್ಟೇಶನ್ ಗಾಣಗಾಪುರದಲ್ಲಿರುವ ಆತನ ನಿವಾಸಕ್ಕೆ ತೆರಳಿದ್ದು, ಆ ಸಂದರ್ಭದಲ್ಲಿ ಆರೋಪಿ ಮನೆಯಲ್ಲಿ ಇಲ್ಲದ ಕಾರಣ ಪೊಲೀಸರು ವಾಪಸ್ಸಾಗಿದ್ದರು. ಈ ವಿಷಯ ತಿಳಿದ ಆರೋಪಿ ಪೋಸಯ್ಯ ಅವರು ರಾತ್ರಿ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ರೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










