ಮೈಸೂರು : ಗುಂಬಜ್ ತೆರವಿಗೆ ನಾನು ನೀಡಿದ ಎರಡು ದಿನದ ಗಡುವು ಮುಗಿದಿದೆ. ಇನ್ನೂ ಎರಡು ದಿನ ಬಾಕಿ ಇದೆ. ಎರಡು ದಿನದಲ್ಲಿ ತೆರವು ಮಾಡದೆ ಇದ್ದರೆ ನಾನು ಹೇಳಿದಂತೆ ನಾನೇ ತೆರವು ಮಾಡುತ್ತೇನೆ. ಆಗ ಬಸ್ ನಿಲ್ದಾಣ ತೆರವು ಮಾಡವುದಿಲ್ಲ. ಬಸ್ ಮೇಲಿನ ಗುಂಬಜ್ ಮಾತ್ರ ತೆರವು ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಸುದ್ದಿಗಾರರೊಂದಿಗೆ ಬಸ್ ನಿಲ್ದಾಣದ ಮೇಲೆ ಗುಂಬಜ್ ವಿಚಾರವಾಗಿ ಮಾತನಾಡಿದ ಅವರು, ನಾನು ಹೇಳಿಕೆ ಕೊಡುವ ಮುನ್ನ ಬರೀ ಗುಂಬಜ್ ಇತ್ತು. ನಂತರ ರಾತ್ರೋರಾತ್ರಿ ಅದರ ಮೇಲೆ ಕಳಸ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ. ಮೈಸೂರು ಅರಮನೆ ಮೇಲಿನ ಗೋಪುರಕ್ಕೂ ಮಸೀದಿ ಮೇಲಿನ ಗುಂಬಜ್ ಗೂ ವ್ಯತ್ಯಾಸ ಇಲ್ವಾ? ಅರಮನೆ ಗೋಪುರಕ್ಕೂ ಗುಂಬಜ್ ಗೂ ಹೋಲಿಕೆ ಮಾಡುವ ಮುನ್ನ ವಾಸ್ತುಶಿಲ್ಪ ಓದಿ ಕೊಳ್ಳಿ. ಅರಮನೆ ಗೋಪುರ ಇಂಡೋ- ಸಾರ್ಸೆನಿಕ್ ವಾಸ್ತುಶಿಲ್ಪದ್ದು, ಬಸ್ ಸ್ಟ್ಯಾಂಡ್ ಮೇಲೆ ಇವರು ಯಾವ ವಾಸ್ತುಶಿಲ್ಪ ಸೃಷ್ಟಿಸುತ್ತಾರೆ ಹೇಳಿ ಎಂದು ಕಿಡಿಕಾರಿದರು.
ಗುಂಬಜ್ ಕಟ್ಟಿದ್ದು ಪ್ರಶ್ನಿಸದಿದ್ದರೆ ಅರ್ಧ ಚಂದ್ರವನ್ನು ಕಟ್ಟಿ ಬಿಡುತ್ತಿದ್ದರು. ಬಸ್ ಸ್ಟ್ಯಾಂಡ್ ಕಟ್ಟಿದ ಗುತ್ತಿಗೆದಾರ ತನ್ನ ಮೇಲೆ ಬೇಕಾದರೆ ಗುಂಬಜ್, ಮಿನಾರ್ ಕಟ್ಟಿ ಕೊಳ್ಳಲಿ. ಶಾಸಕ ರಾಮದಾಸ್ ಅವರು ಅರಮನೆ ಮಾದರಿಯಲ್ಲಿ 20 ಬಸ್ ಸ್ಟ್ಯಾಂಡ್ ಕಟ್ಟಲಿ. ನಾನು ಗುಂಬಜ್ ಬಗ್ಗೆ ಧ್ವನಿ ಎತ್ತಿದ್ದಕ್ಕೆ ರಾಮದಾಸ್ ಅವರು ಮೌನವಹಿಸಿದ್ದಾರೆ ಎಂದರೆ ಅದರ ಅರ್ಥ ನನ್ನ ಮಾತಿಗೆ ಅವರ ಸಮ್ಮತಿ ಇದೆ ಎಂದರು.










