ಬೆಂಗಳೂರು : ಬ್ರೈನ್ ಹೆಮರೇಜ್ ಖಾಯಿಲೆಯಿಂದ ಮೃತಪಟ್ಟ ಯುವ ರೈತನೊಬ್ಬನ ಅಂಗಾಗವನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವಿಕಾಸ್(30) ಎಂಬುವವರು ಪದವಿ ಮುಗಿಸಿ ತಮ್ಮ ಸ್ವಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದರು. ಆದರೆ ಕಳೆದ ಕಲವು ದಿನಗಳ ಹಿಂದೆ ಬ್ರೈನ್ ಹೆಮರೇಜ್ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವಿಕಾಸ್ ಅವರಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಕೋಮಾಗೆ ಜಾರಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಅವರು ನಿನ್ನೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದು, ಸಾವಿನ ಬಳಿಕ ಕುಟುಂಬಸ್ಥರು ವಿಕಾಸ್ ಅವರ ಅಂಗಾಂಗವನ್ನು ಆರೋಗ್ಯ ಮತ್ತು ಕಲ್ಯಾಣ ಇಲಾಖೆಯ “ಜೀವ ಸಾರ್ಥಕತೆ”ಗೆ ದಾನ ಮಾಡುವ ಮೂಲಕ ಎಂಟು ಜನರಿಗೆ ಮರುಜೀವ ನೀಡಿದ್ದಾರೆ. ಇಂದು ವಿಕಾಸ್ ಅವರ ಅಂತ್ಯಕ್ರಿಯೆ ಹುಟ್ಟೂರಲ್ಲಿ ನೆರವೇರಲಿದೆ.










