ಚಿಕ್ಕಮಗಳೂರು : ನಗರದ ಕುವೆಂಪು ಕಾಲಾ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ಕೃಷ್ಣಂ ವಂದೇ ಜಗದ್ಗುರು ಪೌರಾಣಿಕ ನಾಟಕವು ನೆರೆದಿದ್ದ ನೂರಾರು ಪ್ರೇಕ್ಷಕರ ಮನಸೂರೆಗೊಂಡಿತ್ತು.
ಶ್ರೀ ವಾಸವಿ ಮಹಿಳಾ ಸಂಘ ಅನ್ವಿಕಾ ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಂಘದ ಮಹಿಳೆಯರೇ ಸೇರಿ ಅದ್ಭುತ ನಾತಕವನ್ನು ಪ್ರದರ್ಶನ ಮಾಡಿದ್ದರು. ಸಮೀಟ್ ಶಾಲೆ ಶಿಕ್ಷಕರಾದ ಶ್ರೆ ಸತೀಶ್ ಇವರು ನಿರ್ದೇಶನ ಮಾಡಿದ ಸುಮಾರು 1 ಗಂಟೆ ಅವಧಿಯ ನಾಟಕದಲ್ಲಿ ಸುಮಾರು 20 ಕ್ಕು ಅಧಿಕ ಮಹಿಳೆಯರು ಮಹಾಭಾರತದ ವಿವಿಧ ಪಾತ್ರಗಳನ್ನು ಅಭಿನಯ ಮಾಡಿದರು.

ಮಹಾಭಾರತದ ಕೆಲ ಘಟನಾವಳಿಗಳು, ಕುರುಕ್ಷೇತ್ರ ಯುದ್ದ, ಶಕುನಿಯ ಕುತಂತ್ರ, ದುರ್ಯೋಧನನ ಕೊನೆಯ ದಿನ ಹಾಗೂ ಆತ ಹತನಾಗುವ ಸಂದರ್ಭವನ್ನು ನಾಟಕದಲ್ಲಿ ಸತೀಶ್ ಪ್ರೇಕ್ಷಕರಿಗೆ ಬಹುಬೇಗ ತಿಳಿಯುವಂತೆ ನಿರ್ದೇಶನ ಮಾಡಿದರು. ಎಲ್ಲಾ ಪಾತ್ರಗಳಿಗೂ ತಕ್ಕನಾಗಿ ಮಹಿಳೆಯರು ಆ ವೇಷದ ಅಲಂಕಾರ ಮಾಡಿಕೊಂಡು ಪಾತ್ರಗಳಿಗೂ ಜೀವ ತುಂಬಿ ನಟಿಸಿದ್ದು ವಿಶೇಷವಾಗಿತ್ತು. ಪ್ರೇಕ್ಷಕರಿಂದ ಶಿಳ್ಳೆ ಚಪಾಳೆಗಳು ಆಗಾಗ ಕೇಳಿ ಬರುತ್ತಿದ್ದವು.
ನಾಟಕ ಪ್ರದರ್ಶನದ ನಂತರ ಅಧ್ಯಕ್ಷರಾದ ಶೋಭಾಕೃಷ್ಣ ಅವರು ಮಹಭಾರತದಲ್ಲಿ ಕೃಷ್ಣನ ಪಾತ್ರ ಜಗತ್ತನ್ನು ಮುನ್ನಡೆಸುವ ರೀತಿ ಹಾಗೂ ವೇದಿಕೆಯಲ್ಲಿ ಅಭಿನಯಿಸಲು ಮಹಿಳೆಯರು ಪಡೆದುಕೊಂಡ ಹಲವು ದಿನಗಳ ತರಬೇತಿ ಇವುಗಳ ಬಗ್ಗೆ ತಿಳಿಸಿ ಹೇಳಿದರು.
ನಿರ್ದೇಶಕ ಸತೀಶ್ ಮಾತನಾಡಿ ಮಹಿಳೆಯರೆಲ್ಲ ಸೇರಿ 2 ತಿಂಗಳು ತರಬೇತಿ ಪಡೆದು ಅಭಿನಯ ಮಾಡಿದ್ದಾರೆ. ಮತ್ತೊಮ್ಮೆ ಜನರ ಮುಂದೆ ಮಹಾಭಾರತದ ಪಾತ್ರಗಳನ್ನು ಕಣ್ಮುಂದೆ ತಂದು ಮುದಗೊಳಿಸಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ನಿರ್ದೇಶಕ ಸತೀಶ್ ,ವಸ್ತ್ರಂಲಕಾರ ಮಾಡಿದ ಪ್ರಶಾಂತ್, ಸಂಜಯ್ ಸೇರಿ ಹಲವರಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಯಿತು.










