ಮಡಿಕೇರಿ : ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದು ಮಗ ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದ ಆಲೇಕಟ್ಟೆಯಲ್ಲಿ ನಡೆದಿದೆ. ತಂಗಮಣಿ(55) ಹಾಗೂ ಹರೀಶ್(26) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗ ಎಂದು ಗುರುತಿಸಲಾಗಿದ್ದು, ಹರೀಶ್ ಕಳೆದ ಕೆಲವು ತಿಂಗಳ ಹಿಂದೆ ಅಷ್ಟೆ ಆಲೇಕಟ್ಟೆ ರಸ್ತೆಯ ಸಿದ್ದೇಶ್ವರ ಟಯರ್ ವರ್ಕ್ ಸಮೀಪದ ಯುವತಿಯೊಂದಿಗೆ ವಿವಾಹವಾಗಿದ್ದರು. ಆದರೆ ಅವರ ದಾಂಪತ್ಯ ಜೀವನ ಸರಿಯಿಲ್ಲದ ಕಾರಣ ಪತ್ನಿ ತನ್ನ ತವರು ಸೇರಿಕೊಂಡಿದ್ದರು. ಅಲ್ಲದೇ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ತಂಗಮಣಿ ಅವರು ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಅವರು ಮನೆಗೆ ಬಂದ ವೇಳೆ ತಾಯಿ ಮೃತಪಟ್ಟಿರುವುದನ್ನು ನೋಡಿ ತಾನೂ ಕೂಡಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರ ಪೇಟೆ ಪಿಎಸ್ಐ ಶಿವಶಂಕರ್ ಮತ್ತು ಸಿಬ್ಬಂದಿ ಬೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.










