ಮಂಗಳೂರು: ವೇಗವಾಗಿ ಬಂದ ಕಾರೊಂದು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಓರ್ವ ಯುವತಿ ಸಾವನ್ನಪ್ಪಿದ್ದು, 4 ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ಸಂಜೆ ನಗರದ ಮಣ್ಣಗುಡ್ಡೆ ಬಳಿ ನಡೆದಿದೆ.
ಸುರತ್ಕಲ್ನ ಬಾಳ ನಿವಾಸಿ ಗಂಗಾಧರ ಎಂಬವರ ಪುತ್ರಿ ರೂಪಶ್ರೀ ( 22) ಮೃತಪಟ್ಟ ಯುವತಿ. ಘಟನೆಯಲ್ಲಿ ಸ್ವಾತಿ (26), ಹಿಥ್ನವಿ (16) ಕಾರ್ತಿಕಾ( 16) ಮತ್ತು ಯಥಿಕಾ(12) ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರು ಮಹಾನಗರಪಾಲಿಕೆ ಈಜುಕೊಳದ ಬಳಿ ರೂಪಶ್ರೀ ತನ್ನ ಸಂಬಂಧಿಕರ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಕಾರಿನ ಸಮೇತ ಆರೋಪಿ ಪರಾರಿಯಾಗಿದ್ದ.
ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಅಪಘಾತಕ್ಕೆ ಕಾರಣವಾದ ಹೋಂಡಾ ಇಯಾನ್ ಕೆಎ-19-ಎಮ್ಡಿ-5676 ಕಾರು ಹಾಗೂ ಚಾಲಕ ಕಮಲೇಶ್ ಬಲದೇವ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










