ಧಾರವಾಡ : ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಭಾರತೀಯ ಸೇನೆಗೆ ಆಯ್ಕೆಯಾಗಿದ್ದ ಯೋಧ ತರಬೇತಿ ಸಮಯದಲ್ಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಗಪುರದ ಸೇನಾ ಕ್ಯಾಂಪ್ನಲ್ಲಿ ನಡೆದಿದೆ. ತಾಲ್ಲೂಕಿನ ನಿಗದಿ ಗ್ರಾಮದ ಮಹೇಶ್ ಶಿಂಗನಹಳ್ಳಿ(20) ಮೃತ ಯುವ ಯೋಧ ಎಂದು ಗುರುತಿಸಲಾಗಿದ್ದು, ಮಹೇಶ್ ಅವರು ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಭಾರತೀಯ ಸೇನೆಗೆ ಸೇರಿದ್ದು, ನಾಗಪುರದ ಸೇನಾ ಕ್ಯಾಂಪ್ನಲ್ಲಿ ತರಬೇತಿ ಪಡೆಯುತ್ತಿದ್ದರು. ಈ ವೇಳೆ ತಲೆಗೆ ಗಂಭೀರ ಗಾಯವಾಗಿ ಮಹೇಶ್ ಅವರು ಮೃತಪಟ್ಟಿದ್ದು, ತಂದೆ-ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಯೋಧ ಅಗಲಿದ್ದಾರೆ. ಮೃತ ಯೋಧನ ಪಾರ್ಥೀವ ಶರೀರ ಇಂದು ತಮ್ಮ ಸ್ವಗ್ರಾಮ ನಿಗದಿಗೆ ಆಗಮಿಸಲಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.










