ರಾಮನಗರ : ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಮಾವನ ಹತ್ಯೆಗೆ ಸೊಸೆ ಸುಪಾರಿ ನೀಡಿದ್ದಳು ಎಂದು ತಿಳಿದುಬಂದಿದೆ.
ತಾಲೂಕಿನ ಬೈರವನದೊಡ್ಡಿ ಸಮೀಪದ ತೋಟದ ಮನೆಯಲ್ಲಿ ಫೆಬ್ರವರಿ 25ರ ರಾತ್ರಿ ನಡೆದಿದ್ದ ಕಾಂಗ್ರೆಸ್ ಮುಖಂಡ ಗಂಟಪ್ಪ (55) ಹತ್ಯೆ ಪ್ರಕರಣವನ್ನು ಒಂದೂವರೆ ತಿಂಗಳ ಬಳಿಕ ಪೊಲೀಸರು ಬೇಧಿಸಿದ್ದಾರೆ. ಆಸ್ತಿಯಲ್ಲಿ ಪಾಲು ಕೊಟ್ಟಿಲ್ಲ ಎಂದು ಮಾವನ ಹತ್ಯೆಗೆ ಪ್ರಿಯತಮ ನವೀನ್ ಗೆ ಚೈತ್ರಾ ಸುಪಾರಿ ನೀಡಿದ್ದಳು. ಕನಕಪುರ ತಾಲೂಕಿನ ಸೊಂಟನಹಳ್ಳಿ ನಿವಾಸಿ ನವೀನ್ ಎಂಬಾತನಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಲಾಗಿದೆ ಎಂದು ತನಿಖೆ ಮೂಲಕ ತಿಳಿದು ಬಂದಿದೆ.
ಈ ಹಿಂದೆ ನವೀನ್ ಹಾಗೂ ಚೈತ್ರ ಪ್ರೀತಿಸುತ್ತಿದ್ದರು. ಬಳಿಕ ಗಂಟಪ್ಪನ ಮಗ ನಂದೀಶ್ ನನ್ನು ಮದುವೆಯಾಗಿದ್ದಳು. ಪ್ರಕರಣ ಸಂಬಂಧ ಚೈತ್ರಾ ಪತಿ ನಂದೀಶ್ ಅವರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಬಿಡದಿ ಠಾಣೆ ಪೊಲೀಸರು ಇದೀಗ ನವೀನ್ ಹಾಗೂ ಚೈತ್ರಾ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.










