ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ: ಇದೇ ಕೊನೆಯ ಸೀಸನ್; ಅಧಿಕೃತ ಘೋಷಣೆ.

36

ಬೆಂಗಳೂರು: ಸತತ 11 ವರ್ಷಗಳ ಕಾಲ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ನಡೆಸಿಕೊಟ್ಟ ಸುದೀಪ್ ಅವರು ಈಗ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೇ ತಮ್ಮ ಕೊನೆಯ ಸೀಸನ್ ಎಂದು ಅವರು ಘೋಷಿಸಿದ್ದಾರೆ. ಈ ವಿಷಯ ತಿಳಿದು ಅಭಿಮಾನಿಗಳಿಗೆ ಬೇಸರ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಕಾರ್ಯಕ್ರಮದ ನಡುವೆಯೂ ಸುದೀಪ್ ಅವರು ಶಾಕಿಂಗ್ ಸುದ್ದಿ ನೀಡಿದ್ದಾರೆ. ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ನಿರೂಪಕನ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಅವರು ಈಗ ಶೋ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಸ್ತುತ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ನಡೆಸಿಕೊಡುತ್ತಿದ್ದಾರೆ. ಆದರೆ ಮುಂದಿನ ಸೀಸನ್‍ಗೆ ತಾವು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಅಧಿಕೃತವಾಗಿಯೇ ಈ ನಿರ್ಧಾರ ತಿಳಿಸಿದ್ದಾರೆ. ಅವರ ಈ ಪೋಸ್ಟ್ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್‌ಪಿ  ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ’ ಎಂದು ಸುದೀಪ್ ಅವರು ಹೇಳಿದ್ದಾರೆ. ‘ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್ ಬಾಸ್. ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್‍ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ನಿಮ್ಮನ್ನು ಮನರಂಜಿಸುತ್ತೇನೆ’ ಎಂದು ಸುದೀಪ್ ಅವರು ಶಾಕಿಂಗ್ ವಿಷಯ ತಿಳಿಸಿದ್ದಾರೆ. 11ನೇ ಸೀಸನ್ ಆರಂಭದಲ್ಲೇ ಸುದೀಪ್ ಅವರು ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡುವುದು ಅನುಮಾನ ಎಂಬ ವಿಷಯ ಕೇಳಿಬಂದಿತ್ತು. ಆದರೆ ಶೋ ಆಯೋಜಕರು ಸುದೀಪ್ ಅವರ ಮನ ಒಲಿಸಿದ್ದರಿಂದ ಅವರು ಮುಂದುವರಿದರು. ಆದರೆ ಇದು ಅವರ ಕೊನೆಯ ಸೀಸನ್ ಆಗುತ್ತಿದೆ. ‘ನೀವು ಇಲ್ಲದೇ ಬಿಗ್ ಬಾಸ್ ಕಾರ್ಯಕ್ರಮವನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ‘ಇದು ಸರಿಯಾದ ನಿರ್ಧಾರ’ ಎಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ.