ಕಲಬುರಗಿ: ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ನನ್ನ ಸಾವಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ಕಿರುಕುಳ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕಾರಣ ಎಂದು ಆಡಿಯೋ ರೆಕಾರ್ಡ್ ಮಾಡಿಟ್ಟು ಶಿವಕುಮಾರ್ ನೇಣಿಗೆ ಶರಣಾಗಿದ್ದರು. ಆದರೆ ಇದೀಗ ರೈತ ಆತ್ಮಹತ್ಯೆ ಎಂದು ದೂರು ದಾಖಲಾಗಿದೆ. ಸ್ವತಃ ಶಿವಕುಮಾರ್ ಪತ್ನಿ ಮಲ್ಲಮ್ಮ ಅವರು ರೈತ ಆತ್ಮಹತ್ಯೆ ಎಂದು ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನ್ನ ಪತಿ ಹನ್ನೆರಡು ಲಕ್ಷ ಸಾಲ ಮಾಡಿಕೊಂಡಿದ್ದ. ಸಾಲದ ಚಿಂತೆಯಲ್ಲಿ ಮದ್ಯ ಸೇವಿಸುತ್ತಿದ್ದ. ಮಳೆಯಾಗದೇ ಇದ್ದಿದ್ದರಿಂದ ಹೆಸರು ಬೆಳೆ ಹಾಳಾಗಿ ಹೋಗಿತ್ತು. ಸಾಲ ತೀರಿಸಲಿಕ್ಕಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಆತ್ಮಹತ್ಯೆ ಕೇಸ್ ನಲ್ಲಿ ಯಾರ ಮೇಲೆಯೂ ಅನುಮಾನ ಇಲ್ಲ ಎಂದು ಮಲ್ಲಮ್ಮ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚಿಂಚೋಳಿ ತಾಲೂಕಿನ ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಕಳೆದ ರಾತ್ರಿ ಮಲ್ಲಮ್ಮ ದೂರು ದಾಖಲಿಸಿದ್ದಾರೆ. ಸದ್ಯ ದೂರು ಸ್ವೀಕರಿಸಿರುವ ಪೊಲೀಸರು ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಿಕೊಂಡಿದ್ದಾರೆ.










