ಮಂಗಳೂರು: ವಾಹನ ತಪಾಸಣೆ ಮಾಡುತ್ತಿದ್ದ ಹೆಡ್ ಕಾನ್ಸ್ಟೇಬಲ್ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿರುವ ಘಟನೆ ನಗರದ ರಥಬೀದಿ ಸಮೀಪದ ಚಿತ್ರಮಂದಿರದ ಬಳಿ ನಡೆದಿದೆ. ಬಂದರ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಣೇಶ ಕಾಮತ್ ತಲವಾರು ದಾಳಿಗೊಳಗಾದ ಪೊಲೀಸ್.
ಹೆಡ್ಕಾನ್ಸ್ಟೇಬಲ್ ಗಣೇಶ ಅವರು ಇಬ್ಬರು ಸಿಬ್ಬಂದಿ ಜೊತೆ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೋರ್ವ ಮುಖ್ಯ ಪೇದೆ ಗಣೇಶ ಕಾಮತ್ ರಿಗೆ ತಲವಾರಿನಿಂದ ಹಲ್ಲೆಗೈದಿದ್ದಾನೆ. ಕಾಮತ್ ಅವರ ಕೈಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಕೂಡಲೇ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಉತ್ತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










