ಉಡುಪಿ : ಕರಾವಳಿ ಬೈಪಾಸ್ ಬಳಿಯ ಶೆಡ್ ನಲ್ಲಿ ಅಪಹರಣಗೊಂಡ ಬಾಗಲಕೋಟೆ ಮೂಲದ ದಂಪತಿಯ ಎರಡು ವರ್ಷದ ನಾಲ್ಕು ತಿಂಗಳ ಮಗುವನ್ನು 12 ಗಂಟೆಯೊಳಗೆ ರಕ್ಷಿಸಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಉಡುಪಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಗಲಕೋಟೆ ಮೂಲದ ಮುಧೋಳ ತಾಲ್ಲೂಕಿನ ಭಾರತಿ ಮತ್ತು ಅರುಣ್ ದಂಪತಿ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಪಕ್ಕದ ಗುಡಿಸಲಿನಲ್ಲಿದ್ದ ಪರಶು ಎಂಬಾತ ನಿನ್ನೆ ಬೆಳಗ್ಗೆ ಚಹಾ ಕುಡಿಸಿಕೊಂಡು ಬರುತ್ತೇನೆ ಎಂದು ಶಿವರಾಜ್ ನನ್ನು ಕರೆದುಕೊಂಡು ಹೋಗಿದ್ದಾನೆ. ಪರಶು ಎಂಬಾತನೇ ತನ್ನ ಮಗುವನ್ನು ಅಪಹರಿಸಿಕೊಂಡು ಹೋಗಿರಬಹುದೆಂದು ಭಾರತಿ-ಅರುಣ್ ದಂಪತಿ ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು.
ದೂರಿನಂತೆ ಕಾರ್ಯಾಚರಣೆಗಿಳಿದ ಉಡುಪಿ ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್ ನೇತೃತ್ವದ ತಂಡ ಸಿಸಿ ಟಿವಿ ದ್ರಶ್ಯಾವಳಿಗಳನ್ನು ಆದರಿಸಿ ಪರಶು ನಿನ್ನೆ ಬೆಳಗ್ಗೆ ಕರಾವಳಿ ಬೈಪಾಸ್ ನಿಂದ ಸಿಟಿ ಬಸ್ ನಲ್ಲಿ ಪ್ರಯಾಣಿಸಿದ್ದು ಅದರಂತೆ ತನಿಖೆ ಚುರುಕುಗೊಳಿಸಿತು. ಬಳಿಕ ಆತ ಕೆಎಸ್ ಆರ್ ಟಿಸಿ ಬಸ್ ಮೂಲಕ ತೆರಳಿ ಮಗುವಿನೊಂದಿಗೆ ಭಟ್ಕಳದಲ್ಲಿ ಇಳಿದ ಬಗ್ಗೆ ಮಾಹಿತಿ ಪಡೆದು ಉತ್ತರಕನ್ನಡ ಜಿಲ್ಲೆಯ ಪೊಲೀಸರ ಸಹಾಯದೊಂದಿಗೆ ನಿನ್ನೆ ರಾತ್ರಿ ಕುಮಟಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.










