ಒಂದೇ ದಿನದಲ್ಲಿ ಉಡುಪಿ ಎಸ್ಪಿ ಬದಲಾವಣೆ; ನೂತನ ಎಸ್ಪಿಯಾಗಿ ವಿಷ್ಣುವರ್ಧನ್ ನೇಮಕ…

180
firstsuddi

ಉಡುಪಿ : ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇಮಕ ಆದೇಶದಲ್ಲಿ ಬದಲಾವಣೆ ಮಾಡಿದ  ರಾಜ್ಯ ಸರಕಾರ, ಅಕ್ಷಯ್ ಮಚ್ಚೀಂದ್ರ ಅವರನ್ನು ಕೈಬಿಟ್ಟು ಬೆಂಗಳೂರು ನಗರ ಡಿಸಿಪಿ(ಆಡಳಿತ) ಆಗಿದ್ದ ಎನ್.ವಿಷ್ಣುವರ್ಧನ್ ಅವರನ್ನು ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ನಿಯುಕ್ತಿಗೊಳಿಸಿದೆ. 2015ರ ಬ್ಯಾಚ್‌ ನ ಐಪಿಎಸ್ ಅಧಿಕಾರಿಯಾಗಿರುವ ವಿಷ್ಣುವರ್ಧನ್, ಮೂರು ವರ್ಷಗಳ ಹಿಂದೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಒಂದೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಮೈಸೂರು ಎಸ್ಪಿಯಾಗಿ ವರ್ಗಾವಣೆಗೊಂಡಿದ್ದರು.

ಸರಕಾರ ಡಿ.31ರಂದು ರಾತ್ರಿ ಹೊರಡಿಸಿದ ಆದೇಶದಂತೆ ನೂತನ ಎಸ್ಪಿಯಾಗಿ ನೇಮಿಸಿದ್ದ  ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಅಕ್ಷಯ್ ಮಚ್ಚೀಂದ್ರ   ಅವರನ್ನು ಸರಕಾರ ಕಾರ್ಕಳ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.ನಿರ್ಗಮನ ಎಸ್ಪಿ ನಿಶಾ ಜೇಮ್ಸ್ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಳಿಸಿ ಸರಕಾರ ಡಿ.31ರಂದು ಆದೇಶ ಹೊರಡಿಸಿದೆ.