ಕಳಸ:ಶಾಲಾ ಬಾಲಕರು ಸೇರಿದಂತೆ ಗಿರಿಜನರ ಮೇಲೆ ಪೊಲೀಸರ ಹಲ್ಲೆ – ಶ್ರೀನಿವಾಸ ಗೌಡ ಆಕ್ರೋಶ

356

ಕಳಸ:-ಕಲಶೇಶ್ವರ ಜಾತ್ರೆಯ ಸಂದರ್ಭದಲ್ಲಿ ಅನೇಕ ಗಿರಿಜನರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಬಗ್ಗೆ ಆದಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.
‘ರಥೋತ್ಸವ ಮುಗಿಸಿ ನಾವು 15 ಜನರು ಭಾನುವಾರ ಬೆಳಗಿನ ಜಾವ 3 ಗಂಟೆ ವೇಳೆಗೆ ಕಾರಗದ್ದೆ ಸಮೀಪದ ಹೇರಡಿಕೆಗೆ ತೆರಳಲು ಕೆ.ಎಂ.ರಸ್ತೆಯಲ್ಲಿ ಆಟೊಗಾಗಿ ಕಾಯುತ್ತಿದ್ದೆವು. ಪೊಲೀಸ್ ಜೀಪಿನಿಂದ ಇಳಿದ ನಾಲ್ವರು ಪೊಲೀಸರು ಏಕಾಏಕಿ ನಮ್ಮ ಮೇಲೆ ಲಾಠಿಯಿಂದ ಹಲ್ಲೆ ಮಾಡಿದರು. ಇದರಿಂದ ನಮಗೆ ಅನೇಕ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇವೆ.ನಮ್ಮ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇರಡಿಕೆಯ ನಾಗೇಶ್, ದೇವಪ್ಪ, ರಾಕೇಶ್, ಶ್ರೀನಿವಾಸ, ಉಮೇಶ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಪತ್ರ ಬರೆದಿದ್ದಾರೆ.
ಕಳಸ ಪೊಲೀಸ್ ಠಾಣೆಗೂ ಈ ಬಗ್ಗೆ ದೂರು ನೀಡಲಾಗಿದೆ. ಕಳಸ ಠಾಣೆಯ ಬಳಿ ಭಾನುವಾರ ಎರಡು ಬಾರಿ 100ಕ್ಕೂ ಅಧಿಕ ಬುಡಕಟ್ಟು ಜನರು ಜಮಾಯಿಸಿ ಕಳಸೇಶ್ವರನ ಬಿಟ್ಟಿ ಕೆಲಸ ಮಾಡುವ ಗಿರಿಜನರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು.
‘ಅಮಾಯಕ ಗಿರಿಜನರ ಮೇಲೆ ಹಲ್ಲೆ ನಡೆಸಲು ಕಾರಣವೇ ಇರಲಿಲ್ಲ. ಜಾತ್ರೆಯ ದಿನ ರಾತ್ರಿಯಿಡೀ ಮದ್ಯ ಮಾರಾಟ ಮಾಡಿದರೂ ಕ್ರಮ ತೆಗೆದುಕೊಳ್ಳದ ಪೊಲೀಸರು ಅಮಾಯಕ ಗಿರಿಜನರ ಮೇಲೆ ಹಲ್ಲೆ ನಡೆಸಿದ್ದು ಅಕ್ಷಮ್ಯ’ ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಕಾರ್ಯದರ್ಶಿ ಶ್ರೀನಿವಾಸ ಗೌಡ ಆಕ್ರೋಶ ವ್ಯಕ್ತಪಡಿಸಿದರು.
‘ಇಬ್ಬರು ಶಾಲಾ ಬಾಲಕರು ಸೇರಿದಂತೆ ಗಿರಿಜನರ ಮೇಲೆ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಸಮರ್ಥನೀಯವಲ್ಲ’ ಎಂದು ಮಲೆನಾಡು ಸಂರಕ್ಷಣಾ ವೇದಿಕೆಯ ಕೆ.ಎಲ್. ವಾಸು ಬಣ್ಣಿಸಿದರು.
ಕೊಪ್ಪ ಡಿವೈಎಸ್‍ಪಿ ರಮೇಶ್ ಜಹಗೀರ್‍ದಾರ್ ಜೊತೆ ಕಳಸ ಠಾಣೆಯಲ್ಲಿ ಗಿರಿಜನ ಮುಖಂಡರಾದ ಶ್ರೀನಿವಾಸ್, ಕೃಷ್ಣಪ್ಪ, ಶ್ರೀಧರ್, ಕೆ.ಎಲ್.ವಾಸು, ಸತೀಶ್ ಮಾತುಕತೆ ನಡೆಸಿದರು. ಗಿರಿಜನರಿಗೆ ನ್ಯಾಯ ಸಿಗದಿದ್ದರೆ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
‘ಗಿರಿಜನರ ಮೇಲಿನ ಪೊಲೀಸರ ಹಲ್ಲೆ ಘಟನೆಯ ಬಗ್ಗೆ ಎರಡು ದಿನದಲ್ಲಿ ವಿಚಾರಣೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಡಿವೈಎಸ್‍ಪಿ ಭರವಸೆ ನೀಡಿದ ನಂತರ ಗಿರಿಜನರು ಠಾಣೆಯಿಂದ ನಿರ್ಗಮಿಸಿದರು.