ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್, ಅವರ ಸೂಚನೆ ಮೇರೆಗೆ ಇವರ ಕ್ರಮ: ಆರ್ ಅಶೋಕ್ ವಾಗ್ದಾಳಿ.

32

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಅವರ ಸೂಚನೆಗೆ ಮೇರೆಗೆ ಇವರು ಕಾರ್ಯನಿರ್ವಹಿಸುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿ ಪ್ರಕರಣಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ಪ್ರತಿಭಟಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬಿಜೆಪಿ ನಾಯಕರು ಸೋಮವಾರ ಪ್ರತಿಭಟನೆ ನಡೆಸಿದರು. ಇದೇ ವೇಳೆ ಮಾತನಾಡಿದ ಅಶೋಕ, ಈ ಸರ್ಕಾರ ಭಯೋತ್ಪಾದಕರ ಸೂಚನೆ ಮೇರೆಗೆ ನಡೆಯುತ್ತಿದೆ. ಹುಬ್ಬಳಿಯಲ್ಲಿ ಹಾಕಿದ್ದ ಕೇಸ್ ಗಳನ್ನು ವಾಪಸ್ ಪಡೆಯಿರಿ ಎಂದು ಅವರು ಸೂಚನೆ ನೀಡಿದರು, ಅದಕ್ಕೆ ಇವರು ವಾಪಸ್ ಪಡೆದಿದ್ದಾರೆ. ಮುಸ್ಲಿಮರ ಋಣ ತೀರಿಸುತ್ತಿದ್ದಾರೆ ಎಂದರು. ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣ, ವಾಲ್ಮೀಕಿ ಹಗರಣದ ಆರೋಪ ಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸೈಟ್ ವಾಪಸ್ ಕೊಟ್ಟಿದ್ದಾರೆ. ಸಿದ್ದರಾಮಯ್ಯಗೆ ಅವರ ಪಕ್ಷದವರೇ ಬೆಂಬಲ ಕೊಡುತ್ತಿಲ್ಲ. ಮುಸ್ಲಿಮರ ಒಲೈಕೆ ಮಾಡಿ ಉಳಿಯಬೇಕು ಎಂದು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು. ಇವರು ಹಿಂದುಗಳ ಮೇಲಿನ ಕೇಸ್‍ಗಳನ್ನು ವಾಪಸ್ಸು ಪಡೆದಿದ್ದಾರಾ? ಬಿಜೆಪಿ ಶಾಸಕ ಮುನಿರತ್ನಗೆ ಜೈಲಾಗಿದೆ. ಆದರೆ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮೇಲೆ ರೇಪ್ ಕೇಸ್ ಆಗಿದೆ, ಅವರಿಗೆ ಯಾಕೆ ಜೈಲಿಲ್ಲಾ ಎಂದು ಅಶೋಕ್ ಪ್ರಶ್ನಿಸಿದರು.
ಇವರ (ಕಾಂಗ್ರೆಸ್ ನಾಯಕರ) ಬ್ರದರ್ಸ್ ಯಾರು? ಕುಕ್ಕರ್ ಬ್ಲಾಸ್ಟ್ ಮಾಡಿದ್ರೆ ಇವರ ಬ್ರದರ್ಸ್. ಎಲ್ಲಾ ಕಡೆ ಹಿಂದುಗಳನ್ನ ತುಳಿಯಲಾಗುತ್ತಿದೆ. ಗಣೇಶ ಹಬ್ಬಕ್ಕೆ ಪೊಲೀಸ್ ಅನುಮತಿ ಬೇಕು. ಸರ್ಕಾರ ಟಿಪ್ಪು ಆಡಳಿತ ಮಾಡುತ್ತಿದೆ. ಸಿದ್ದರಾಮಯ್ಯ ಮನೆ ದೇವರು ಟಿಪ್ಪು. ನಾಮ ಇಟ್ಟುಕೊಂಡು ಹೋದರೆ ನಾಮ್ ಗಿರಾಕಿನ ಅಂತಾ ಚೇಡಿಸ್ತಿದ್ರ, ಟ್ರಾನ್ಸಫರ್‍ಗೆ ಹೋದ್ರೆ ಜಿಲಾಬಿನಾ ಅನ್ನೋರು. ಈಗ ಸಿದ್ದರಾಮಯ್ಯ ಅವರೇ ಹೋಗಿ ಕುಂಕುಮ ಇಟ್ಟುಕೊಳ್ತಿದ್ದಾರೆ. ಜನ್ಮದಲ್ಲೇ ಅರ್ಚನೆ ಮಾಡಿಸಿರಲಿಲ್ಲ, ಈಗ ಮಾಡಿಸುತ್ತಿದ್ದಾರೆ. ಅವರು ಹೋಗುವ ಸಮಯ ಬಂದಿದೆ ಎಂದು ಅಶೋಕ್ ಕಿಡಿ ಕಾರಿದರು. ಮೈಸೂರು ಏರ್ ಪೋರ್ಟ್‍ಗೆ ಚಾಮುಂಡೇಶ್ವರಿ ಹೆಸರು ಯಾಕೆ ಇಡಲಿಲ್ಲ? ನಾವು ಪ್ರತಿಭಟನೆ ಮಾಡಲಿಲ್ಲ ಎಂದರೆ ಟಿಪ್ಪು ಹೆಸರು ಇಡುತ್ತಿದ್ದರು. ಮುಸಲ್ಮಾನರ ತುಘಲಕ್ ಆಡಳಿತ ನಡೆಯುತ್ತಿದೆ. ಪ್ರತಿಭಟನೆ ಮುಗಿದ ಮೇಲೆ ರಾಜಭನಕ್ಕೆ ಹೋಗಿ ಸರ್ಕಾರದ ವಿರುದ್ದ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಸರ್ಕಾರದ ವಿರುದ್ದ ಇನ್ನು ಹೋರಾಟ ಮಾಡುತ್ತೇವೆ ಎಂದು ಅಶೋಕ್ ಎಚ್ಚರಿಕೆ ನೀಡಿದರು. ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಅಶ್ವತ್ಥ್ ನಾರಾಯಣ, ಎಸ್ಆರ್ ವಿಶ್ವನಾಥ್, ಎಂಎಲ್‍ಸಿಗಳಾದ ಛಲವಾದಿ ನಾರಾಯಣ ಸ್ವಾಮಿ, ಎನ್.ರವಿಕುಮಾರ್ ಭಾಗಿಯಾದರು. ಪ್ರತಿಭಟನೆ ಸಮಾವೇಶದಲ್ಲಿ ಭಾಗಿಯಾದ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.