ಯಾದಗಿರಿ : ಬಳ್ಳಾರಿಯಲ್ಲಿ ನಿನ್ನೆ ಕೊರೊನಾ ಸೋಂಕಿತರ ಮೃತದೇಹವನ್ನು ದರದರನೆ ಎಳೆದು ಗುಂಡಿಗೆ ಬಿಸಾಡಿರುವ ಘಟನೆ ಮಾಸುವ ಮುನ್ನವೇ ಇಂದು ಯಾದಗಿರಿ ಜಿಲ್ಲೆಯ ಹೊನಗೇರಾ ಗ್ರಾಮದಲ್ಲಿ ಅಂತಹದ್ದೇ ಘಟನೆಯೊಂದು ನಡೆದಿದೆ. ಸೋಂಕಿತ ವ್ಯಕ್ತಿ ತನ್ನ ಮಗಳ ಮದುವೆ ನಡೆದ ಮರುದಿನವೇ ಸೋಂಕಿನಿಂದ ಮೃತಪಟ್ಟಿದ್ದರು. ಬಳಿಕ ಮರಣೋತ್ತರ ಪರೀಕ್ಷೆ ವೇಳೆ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ದೃಡವಾದ ಹಿನ್ನೆಲೆ, ಇಂದು ಮೃತ ವ್ಯಕ್ತಿಯ ಹುಟ್ಟೂರಾದ ಹೊನಗೇರಾದಲ್ಲಿ ಅಧಿಕಾರಿಗಳು ಆರೋಗ್ಯ ಇಲಾಖೆಯ ನಿಯಮಾವಳಿಗಳಂತೆ ಅಂತ್ಯ ಸಂಸ್ಕಾರ ನಡೆಸಲು ಮೂಂದಾಗಿದ್ದರು. ಆದರೆ ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ಆಸ್ಪತ್ರೆ ಸಿಬ್ಬಂದಿಗಳು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯ ಶವವನ್ನು ಕಟ್ಟಿಗೆಯೊಂದರಲ್ಲಿ ಕಟ್ಟಿ ಶವವನ್ನು ದರದರನೆ ಎಳೆದು ತಂದು ಗುಂಡಿಗೆ ಬಿಸಾಡಿ ಅಮಾನವೀಯತೆಯಿಂದ ವರ್ತಿಸಿದ್ದಾರೆ.










