ಬಿಜೆಪಿ-ಜೆಡಿಎಸ್ ಮೈತ್ರಿಯು ತಾತ್ಕಾಲಿಕವಲ್ಲ, ಮುಂದೆಯೂ ಇರಲಿದೆ: ಹೆಚ್​ಡಿಕೆ.

42
firstsuddi

ಬೆಂಗಳೂರು: ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಅದರಂತೆ ಮೂರು ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಜೆಪಿ ಬಿಟ್ಟುಕೊಟ್ಟಿದ್ದು, ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಜೆಡಿಎಸ್ ಬೆಂಬಲಿಸಲಿದೆ. ಆದರೆ, ಈ ಮೈತ್ರಿಯು ತಾತ್ಕಾಲಿಕವಲ್ಲ ಎಂದು ಹೇಳಿರುವ ಹೆಚ್.ಡಿ. ಕುಮಾರಸ್ವಾಮಿ , ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ಮೈತ್ರಿ ನಾಯಕರು ಭದ್ರ ಬುನಾದಿ ಹಾಕಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಅಸಾಧ್ಯ ಎಂದರು.

ನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಮೂರನೇ ಬಾರಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದು ಎಷ್ಟು ಸತ್ಯವೋ, ಸೂರ್ಯ ಚಂದ್ರ ಹುಟ್ಟುವುದು ಅಷ್ಟೇ ಸತ್ಯ. ಬೂತ್ ಮಟ್ಟ, ಜಿಲ್ಲಾ ಮಟ್ಟದಲ್ಲಿ ಪರಸ್ಪರ ಸಂಶಯಕ್ಕೆ ಒಳಗಾಗದೇ ಕೆಲಸ ಮಾಡಬೇಕು. ಮೈತ್ರಿ ನಾಯಕರು ಭದ್ರ ಬುನಾದಿ ಹಾಕಿದರೆ ಕಾಂಗ್ರೆಸ್ ಬರಲು ಸಾಧ್ಯವಿಲ್ಲ ಎಂದರು.

ಮೈತ್ರಿಯಿಂದಾಗಿ ಕಾಂಗ್ರೆಸ್‌ಗೆ ಅಂದೇ ಭಯ ಶುರುವಾಗಿದೆ. ಇದು ತಾತ್ಕಾಲಿಕ ಮೈತ್ರಿ ಅಲ್ಲ, ಇನ್ನೂ ಮುಂದೆ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಇದು ರಾಜ್ಯದ ಅಭಿವೃದ್ಧಿ ಮೈತ್ರಿಯಾಗಿದೆ. ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕನಿಷ್ಠ 25 ಸಾವಿರ ಮತಗಳ ಲೀಡ್ ಕೊಡಿಸುತ್ತೇನೆ ಎಂದರು.

ನಮ್ಮ ಈ ಮೈತ್ರಿ ಕೃತಕವಾಗಿ ಸೃಷ್ಟಿಯಾಗಿಲ್ಲ. ಹಿಂದಿನ ಮೈತ್ರಿ ಸರ್ಕಾರದಲ್ಲಿ ಯಡಿಯೂರಪ್ಪ ಸಹಕಾರ ಕೊಟ್ಡಿದ್ದಕ್ಕೆ ಹಲವು ಒಳ್ಳೆಯ ಕೆಲಸ ಆಗಿದೆ. ಅದೇ ಮಾದರಿಯ ಸರ್ಕಾರ ಮತ್ತೆ ತರಬೇಕು, ಇದಕ್ಕೆ ಈ ಮೈತ್ರಿ ವೇದಿಕೆ ಆಗಬೇಕು. ಎರಡೂ ಪಕ್ಷಗಳಲ್ಲಿ ಬೂತ್ ಮಟ್ಟದಿಂದ ಸಮನ್ವಯತೆ ಸಾಧಿಸಲು ಪರಸ್ಪರ ಪಕ್ಷಗಳ ಬಾವುಟಗಳ ಬಳಕೆ ಮಾಡುತ್ತೇವೆ ಎಂದರು.

ಎರಡೂ ಪಕ್ಷಗಳ ಸಂಶಯಕ್ಕೆ ಒಳಗಾಗದೇ ಒಟ್ಟಾಗಿ ಹೋಗುತ್ತೇವೆ. ನಮ್ಮ ಕಾರ್ಯಬದ್ಧತೆಯಲ್ಲಿ ಕಿಂಚಿತ್ತೂ ಅಡ್ಡಿ ಆಗಬಾರದು. ಸಣ್ಣಪುಟ್ಟ ಸಮಸ್ಯೆ ಇದ್ದರೆ ಉಸ್ತುವಾರಿಗಳ ಗಮನಕ್ಕೆ ತನ್ನಿ. ಇದು ತಾತ್ಕಾಲಿಕ ಮೈತ್ರಿ ಅಲ್ಲ, ಮುಂದೆಯೂ ಮುಂದುವರೆಯಬೇಕು ಎಂಬ ಉದ್ದೇಶ ಇದೆ ಎಂದರು.