ಬೆಂಗಳೂರು: ಮೆಜೆಸ್ಟಿಕ್‍ನಲ್ಲಿ ರಸ್ತೆ ಗುಂಡಿಗಳದ್ದೇ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್.

27

ಬೆಂಗಳೂರು: ಮಳೆ ಬಂದರೆ ಸಾಕು ಬೆಂಗಳೂರಿನಲ್ಲಿ ಯಮರೂಪಿ ರಸ್ತೆ ಗುಂಡಿಗಳು ಪ್ರತ್ಯಕ್ಷವಾಗುತ್ತವೆ. ನಗರದ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್‍ನಲ್ಲಿ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಮಳೆ ಬಂದು ಬಿಡುತ್ತಿದ್ದಂತೆಯೇ ಅನೇಕ ರಸ್ತೆಗುಂಡಿಗಳು ಪ್ರತ್ಯಕ್ಷವಾಗಿವೆ. ದಿನಕ್ಕೆ ಸಾವಿರಾರು ಬಿಎಂಟಿಸಿ ಬಸ್‍ಗಳು ಇಲ್ಲಿ ಓಡಾಡುತ್ತವೆ. ವಾಹನ ಸವಾರರು ಹಾಗೂ ಬಸ್‍ನಲ್ಲಿ ಪ್ರಯಾಣಿಸುವ ಜನರಿಗೂ ರಸ್ತೆ ಗುಂಡಿಗಳಿಂದ ತೊಂದರೆಯಾಗುತ್ತಿದೆ. ಗುಂಡಿಯಲ್ಲಿ ವಾಹನ ಚಲಾಯಿಸುವ ಕಾರಣ ಬಸ್‍ಗಳ ಆಕ್ಸಲ್ ಕಟ್ ಆಗುತ್ತವೆ. ಜೊತೆಗೆ ವಯಸ್ಸಾದ ಸವಾರರಿಗೂ ಬೆನ್ನು ನೋವಿನಂತಹ ಸಮಸ್ಯೆಗಳು ಹೆಚ್ಚಾಗಲು ರಸ್ತೆ ಗುಂಡಿಗಳು ಕಾರಣವಾಗುತ್ತಿವೆ. ಇಷ್ಟಾದರೂ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿಗೆ ಡಿಸಿಎಂ ಡಿಕೆ ಶಿವಕುಮಾರ್ ಗಡುವು ನೀಡಿದ್ದರು. ಅದರಂತೆ ಸಾವಿರಾರು ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಹೇಳಿತ್ತು. ಆದರೀಗ 2-3 ದಿನ ಸುರಿದ ಮಳೆ ವಾಸ್ತವವನ್ನು ಬಯಲು ಮಾಡಿದೆ. ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಸಾಲು ಸಾಲು ರಸ್ತೆಗುಂಡಿಗಳು ಕಾಣಿಸುತ್ತಿವೆ.