ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಂದು ಮತ್ತೋರ್ವ ಆರೋಪಿ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ನಗರದ ಹೆಬ್ಬಾಳದಲ್ಲಿರುವ ಆದಿತ್ಯ ಆಳ್ವ ನಿವಾಸದ ಮೇಲೆ ಸಿಸಿಬಿ ಪೊಲೀಸರು ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿದ್ದಾರೆ. ಆದಿತ್ಯ ಆಳ್ವ ನಿವಾಸ ಆರು ಎಕರೆ ವಿಸ್ತೀರ್ಣದಲ್ಲಿದ್ದು, ಈ ಮನೆಯಲ್ಲೇ ವೀಕೆಂಡ್ ಪಾರ್ಟಿ ನಡೆಯುತ್ತಿತ್ತು ಎಂದು ಪ್ರಕರಣದ ಆರೋಪಿ ರವಿಶಂಕರ್ ಸಿಸಿಬಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದರು. ಇತ್ತ ಈ ಪ್ರಕರಣದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವ ಕುಟುಂಬ ಸಮೇತರಾಗಿ ನಾಪತ್ತೆಯಾಗಿದ್ದು, ಸಿಸಿಬಿ ದಾಳಿ ವೇಳೆ ಮನೆ ಕೆಲಸದವರು ಮಾತ್ರ ಇದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.










