ಅಯೋಧ್ಯೆ ತೀರ್ಪು; ಹಿಂದೂ ಮುಸಲ್ಮಾನರಲ್ಲಿ ಬಾಂಧವ್ಯ ಬೆಳೆಯಲು ಉತ್ತಮ ಅವಕಾಶ – ಪೇಜಾವರ ಸ್ವಾಮೀಜಿ.

290
firstsuddi

ಉಡುಪಿ:  ವಿವಾದಿತ ಅಯೋಧ್ಯೆ – ಬಾಬರಿ ಮಸೀದಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಪ್ರಕಟಿಸಿರುವ ಐತಿಹಾಸಿಕ ತೀರ್ಪು ನನಗೆ ವೈಯುಕ್ತಿವಾಗಿ ಸಂತೋಷ ತಂದಿದೆ. ನನ್ನ ಇಳಿ ವಯಸ್ಸಿನಲ್ಲಿ ಈ ತೀರ್ಪು ನೋಡುತ್ತೇನೆ ಎಂದು ಭಾವಿಸಿರಲಿಲ್ಲ. ಈ ತೀರ್ಪು ಹಿಂದೂ ಮುಸಲ್ಮಾನರಲ್ಲಿ ಬಾಂಧವ್ಯ ಬೆಳೆಯಲು ಉತ್ತಮ ಅವಕಾಶ ಎಂದು ಪೇಜಾವರ ಮಠದ ಹಿರಿಯ ಸ್ವಾಮೀಜಿ  ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಉಡುಪಿಯಲ್ಲಿ ಅಯೋಧ್ಯೆಯ  ಐತಿಹಾಸಿಕ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಮಠದ ಸಭಾಂಗಣದಲ್ಲಿ ಟಿವಿಯಲ್ಲಿ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದರು. ಎಲ್ಲರೂ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸಬೇಕು ನನಗೆ ವೈಯಕ್ತಿಕವಾಗಿಯೂ ಈ ತೀರ್ಪು ಸಮ್ಮತವಾಗಿದೆ. ಮುಸ್ಲಿಮರಿಗೂ ಐದು ಎಕರೆ ಕೊಡಬೇಕು ಎಂದು ತೀರ್ಪಿನಲ್ಲಿ ಹೇಳಿದ್ದಾರೆ. ಸರಕಾರವೇ ರಾಮಮಂದಿರ ನಿರ್ಮಾಣ ಮಾಡಬೇಕು ಎಂಬ ತೀರ್ಪು ಬಂದಿದೆ. ಹಿಂದೂಗಳಿಗೆ ಜನ್ಮಭೂಮಿಯ ಹಕ್ಕು ಮುಖ್ಯ ಅದೇ ರೀತಿ ಮುಸಲ್ಮಾನರಿಗೆ ಮಸೀದಿಗೆ ಜಾಗ ಮುಖ್ಯ. ಈ ತೀರ್ಪು ಹಿಂದೂ ಮುಸಲ್ಮಾನರಲ್ಲಿ ಬಾಂಧವ್ಯ ಬೆಳೆಯಲು ಉತ್ತಮ ಅವಕಾಶ ಎಂದರು.

ಹಿಂದೂ ಮುಸಲ್ಮಾನರು ಒಟ್ಟು ಸೇರಿ ಸೂಕ್ತ ಸ್ಥಳವನ್ನು ಮಸೀದಿಗೆ ಕೊಡಬೇಕು ಅಲ್ಲದೆ ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಕರಿಸಬೇಕು ಮತ್ತು ಮಂದಿರ ನಿರ್ಮಾಣ ವಿಚಾರದಲ್ಲಿ ಮುಸ್ಲಿಮರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ತೀರ್ಪಿನ ವಿಚಾರದಲ್ಲಿ ವಿಜಯೋತ್ಸವ ,ಮೆರವಣಿಗೆ ಬೇಡ ಎಂದು ನಿನ್ನೆಯೇ ಹೇಳಿದ್ದೆ. ಈಗಲೂ ಪುನರುಚ್ಚಾರ ಮಾಡುವೆ. ಮುಸಲ್ಮಾನರು ಸಮಚಿತ್ತದಿಂದ ಸ್ವೀಕರಿಸಬೇಕು ಮತ್ತು ದೇಶದ ಎಲ್ಲರೂ ಕೋಮು ಸೌಹಾರ್ದದಿಂದ ಇರಬೇಕು ಎಂದು ಮನವಿ ಮಾಡುವೆ ಎಂದು ಅವರು ಹೇಳಿದರು.