ನವದೆಹಲಿ : ಅಯೋಧ್ಯೆ ತೀರ್ಪು ನಮಗೆ ತೃಪ್ತಿ ನೀಡಿಲ್ಲ. ಹೀಗಾಗಿ ನ್ಯಾಯಮೂರ್ತಿಗಳ ಆದೇಶವನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತೇವೆ ಎಂದು ಸುನ್ನಿ ವಕ್ಫ್ ಮಂಡಳಿ ವಕೀಲ ಜಾಫ್ರಯಾಬ್ ಗಿಲಾನಿ, ಜಲಾನಿ ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅಯೋದ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಮಗೆ ಈ ತೀರ್ಪು ತೃಪ್ತಿ ನೀಡಿಲ್ಲ. ಮಸೀದಿ ನಿರ್ಮಾಣ ಮಾಡಲು ನಮಗೆ ಬೇರೆ ಜಾಗ ನೀಡಿರುವುದು ಸರಿಯಲ್ಲ. ವಿವಾದಿತ ಸ್ಥಳದಲ್ಲಿ ನಮಾಜ್ ಮಾಡಲಾಗಿದೆ ಎಂದು ಹೇಳಿದರೂ ಆ ಸ್ಥಳವನ್ನು ಬೇರೆಯವರಿಗೆ ನೀಡಲಾಗಿದೆ. ತೀರ್ಪಿನ ಕೆಲವು ಅಂಶಗಳ ಬಗ್ಗೆ ಮಾತ್ರ ನಮಗೆ ಅಸಮಾಧಾನವಿದೆ. ಹೀಗಾಗಿ ನಾವು ಸುಪ್ರೀಂ ಆದೇಶವನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುತ್ತೇವೆ ಎಂದರು.










