ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಇದರೊಂದಿಗೆ ಚಿತ್ರರಂಗದ ಜೊತೆ ಕೂಡ ಅವರು ಉತ್ತಮ ಒಡನಾಟ ಹೊಂದಿದ್ದರು. ಕೃಷ್ಣರವರ ಸದಾಶಿವನಗರದ ನಿವಾಸಕ್ಕೆ ರಮ್ಯಾ, ಸಾರಾ ಗೋವಿಂದು, ಶಿವಣ್ಣ ಬಳಿಕ ಅಂತಿಮ ದರ್ಶನ ಪಡೆದ ಬಳಿಕ ಅಶ್ವಿನಿ ಪುನೀತ್ ರಾಜ್ಕುಮಾರ್ ಅಂತಿಮ ನಮನ ಸಲ್ಲಿಸಿದರು. ಮನೆ ಮಗ ಯುವರಾಜ್ಕುಮಾರ್ ಜೊತೆ ಪುನೀತ್ ಪತ್ನಿ ಅಶ್ವಿನಿ ಆಗಮಿಸಿ ಎಸ್.ಎಂ. ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಇನ್ನೂ ಈ ವೇಳೆ, ಶಿವಣ್ಣ ಮಾತನಾಡಿ, ಎಸ್.ಎಂ ಕೃಷ್ಣ ಅವರ ಮೇಲೆ ತುಂಬಾ ಗೌರವಿದೆ. ಸಿಎಂ ಅಂದರೆ ಹೇಗಿರಬೇಕು ಅನ್ನೋದಾದ್ರೆ ಕೃಷ್ಣ ಅವರಂತಿರಬೇಕು. ಶಿಸ್ತು ಅವರು ಮಾಡುವ ಕೆಲಸದಲ್ಲಿ ಇರುತ್ತಿತ್ತು. ವೀರಪ್ಪನ್ ಅಪ್ಪನ ಅಪಹರಣ ಮಾಡಿದ ಸಂದರ್ಭದಲ್ಲಿ ಅವರು ನಮ್ಮ ಕುಟುಂಬದ ಜೊತೆ ನಿಂತಿದ್ದರು. ಅದನ್ನು ನಾವು ಯಾವತ್ತು ಮರೆಯೋದಿಲ್ಲ. ವೈಯಕ್ತಿಕವಾಗಿ ನಮಗೂ ಅವರೊಂದಿಗೆ ಒಡನಾಟವಿದೆ. ಅವರ ಇಡೀ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯವಿದೆ. ಖಂಡಿತ ಅವರಿಲ್ಲ ಅನ್ನೋದು ದುಃಖ ಆಗುತ್ತದೆ. ಅವರಿಗೆ 92 ವರ್ಷವಾಗಿತ್ತು. ಆದರೆ ಅವರಿಲ್ಲ ಅನ್ನುವ ನಷ್ಟವಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಶಿವಣ್ಣ ಮಾತನಾಡಿದ್ದಾರೆ. ಇನ್ನೂ ಕರ್ನಾಟಕ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ (92) ಅವರು ಮಂಗಳವಾರ ಬೆಳಗ್ಗೆ 3:30ಕ್ಕೆ ವಿಧಿವಶರಾಗಿದ್ದಾರೆ.










