ಚೆನ್ನೈ : ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂಬ ವಂದಂತಿಗಳು ಹರಿದಾಡಿದ ಕೆಲವೇ ಗಂಟೆಗಳ ಬಳಿಕ ಇದೀಗ ಅವರ ಪುತ್ರ ಎಸ್.ಪಿ ಚರಣ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಫೇಸ್ಬುಕ್ನಲ್ಲಿ ವೀಡಿಯೋ ಹೇಳಿಕೆ ಬಿಡುಗಡೆ ಮಾಡುವ ಮೂಲಕ “ ಅಪ್ಪನಿಗೆ ಕೋವಿಡ್ ನೆಗೆಟಿವ್ ಬಂದಿದೆ ಎಂಬ ಮಾಹಿತಿ ನನ್ನಿಂದ ಹೇಳಲ್ಪಟ್ಟಿದ್ದಲ್ಲ. ವದಂತಿಗಳನ್ನು ಹರಡದಿರಿ, ವದಂತಿಗಳಿಗೆ ಕಿವಿ ಕೊಡದಿರಿ’’ ಎಂದು ಹೇಳಿದ್ದಾರೆ.
ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಎಸ್.ಪಿ ಚರಣ್ ಅವರು ಆಸ್ಪತ್ರೆಯಿಂದ ಎಸ್ಪಿಬಿ ಅವರ ಆರೋಗ್ಯ ಸ್ಥಿತಿ ಬಗ್ಗೆ ನೇರ ಮಾಹಿತಿ ಪಡೆಯುವ ಏಕೈಕ ವ್ಯಕ್ತಿ ನಾನು. “ ನಾನು ಸಾಮಾನ್ಯವಾಗಿ ಆಸ್ಪತ್ರೆಯ ವೈದ್ಯಕೀಯ ತಂಡದೊಂದಿಗೆ ಚರ್ಚಿಸಿದ ನಂತರ ಅಪ್ಪನವರ ಆರೋಗ್ಯ ಸ್ಥಿತಿಯ ಬಗ್ಗೆ ಪೋಸ್ಟ್ ಮಾಡುತ್ತೇನೆ. ಆದರೆ ದುರಾದೃಷ್ಟವಶಾತ್, ನಾನು ಬೆಳಿಗ್ಗೆ ಒಂದು ಪೋಸ್ಟ್ ಹಾಕಲು ಒತ್ತಡದಲ್ಲಿದ್ದೆ.”
ಇಂದು ಎಸ್ಪಿಬಿ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂಬ ವದಂತಿ ಎಲ್ಲೆಡೆ ಹರಡುತ್ತಿದೆ. ಇದು ದುರಾದೃಷ್ಟಕರ. ಕೋವಿಡ್ ನೆಗೆಟಿವ್ ಅಥವಾ ಪಾಸಿಟಿವ್ ಏನೇ ಆಗಿದ್ದರೂ ಆರೋಗ್ಯ ಸ್ಥಿತಿ ಇನ್ನೂ ಹಾಗೆಯೇ ಇದೆ ಎಂದು ಹೇಳಿದ್ದಾರೆ. ಎಸ್ಪಿಬಿ ಅವರಿಗೆ ಲೈಫ್ ಸಪೋರ್ಟ್ ಅನ್ನು ಮುಂದುವರೆಸಲಾಗಿದೆ. ಆದರೆ ಅವರ ಪ್ರಮುಖ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ತಂಡದೊಂದಿಗೆ ಚರ್ಚಿಸಿದ ನಂತರ ಇಂದು ಸಂಜೆ ಆರೋಗ್ಯದ ಬಗ್ಗೆ ವಿವರ ನೀಡುತ್ತೇನೆ ಎಂದು ಅವರು ಹೇಳಿದರು.










