ಬೆಂಗಳೂರು : ಕಾಂಗ್ರೆಸ್ನವರು ಆಜಾ ಆಜಾ ಅಂತಿದ್ದಾರೆ. ಆದರೆ ದೇವೇಗೌಡರು ಕಭಿ ನಹಿ ಕಭಿ ನಹಿ ಎಂದು ಹೇಳುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ರಾಜ್ಯದಲ್ಲಿ ಪುನಃ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಉಪಚುನಾವಣೆಯಲ್ಲಿ ಎಲ್ಲಾ 15ಕ್ಷೇತ್ರಗಳಲ್ಲೂ ನಾವೆ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಹಾಕಬೇಕಿತ್ತು. ಜೆಡಿಎಸ್-ಕಾಂಗ್ರೆಸ್ ಸೇರಿ ಅಭ್ಯರ್ಥಿಯನ್ನು ಹಾಕಿದ್ದರೆ ಗೆಲ್ಲುತ್ತಿರಲಿಲ್ಲವೇ? ಕಾಂಗ್ರೆಸ್ನವರು ಬರಗೆಟ್ಟು ಹೋಗಿದ್ದಾರೆ. ಚುನಾವಣೆಗೂ ಮೊದಲೇ ಶಸ್ತ್ರ ತ್ಯಾಗವನ್ನು ಮಾಡಿದ್ದಾರೆ. ಕಾಂಗ್ರೆಸ್ನವರು ಆಜಾ ಆಜಾ ಎಂದರೆ, ದೇವೇಗೌಡರು ಕಭಿ ನಹಿ ಕಭಿ ನಹಿ ಎಂದು ಹೇಳುತ್ತಿದ್ದಾರೆ. ರಾಜ್ಯಸಭಾ ಉಪಚುನಾವಣೆಯಲ್ಲಿ ಹೊಂದಾಣಿಕೆ ಆಗದೇ ಇದ್ದವರು ಇನ್ನು ಮುಖ್ಯ ಪರೀಕ್ಷೆಯಲ್ಲಿ ಹೊಂದಾಣಿಕೆ ಆಗುತ್ತಾರಾ ಎಂದು ವಾಗ್ದಾಳಿ ನಡೆಸಿದರು.










