ನವದೆಹಲಿ : 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಭಾರತೀಯ ಸೈನಿಕರು ಅದ್ದೂರಿಯಿಂದ ಆಚರಿಸುತ್ತಿದ್ದು, ಭಾರತೀಯ ಸೇನೆ 1999ರಲ್ಲಿ ಅಕ್ರಮವಾಗಿ ಒಳ ನುಸುಳುತ್ತಿದ್ದ ಪಾಕಿಸ್ತಾನ ಸೈನಿಕರು ಹಾಗೂ ಉಗ್ರರ ವಿರುದ್ಧ ಹೋರಾಡಿ ಯುದ್ಧದಲ್ಲಿ ಜಯಗಳಿಸಿತ್ತು. ಆಪರೇಷನ್ ವಿಜಯ್ನ 20ನೇ ವರ್ಷದ ಆಚರಣೆಯ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜಮ್ಮು ಕಾಶ್ಮೀರದಲ್ಲಿರುವ ಕಾರ್ಗಿಲ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕಥುವಾ ಜಿಲ್ಲೆಯ ಉಝ್ ಹಾಗೂ ಸಂಬ ಜಿಲ್ಲೆಯ ಬಸಂತರ್ನಲ್ಲಿ ನಿರ್ಮಿಸಿರುವ ಎರಡು ಸೇತುವೆಗಳ ಲೋಕಾರ್ಪಣೆ ಮಾಡಿದರು. ವಿಜಯೋತ್ಸವದ ಅಂಗವಾಗಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಪ್ರೇರಣೆ ನೀಡುವ ಉಪನ್ಯಾಸ, ಶಾಲಾ ಮಕ್ಕಳಿಗೆ ಕಾರ್ಗಿಲ್ ಪ್ರದೇಶದ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಲಾಗಿದೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ ತಿಳಿಸಿದರು.










