ಚಿಕ್ಕಮಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿರುವ ಬಗ್ಗೆ ನನಗೆ ಪೊಲೀಸರ ಮೇಲೆಯೇ ಅನುಮಾನವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮತ್ತು ಪೊಲೀಸರು ಸಮಾಜವನ್ನು ಒಡೆಯುವಂತಹ ಕೆಲಸವನ್ನು ಮಾಡಬಾರದು. ನನಗೆ ಕೆಲವು ಪೊಲೀಸರ ಮೇಲೆ ನಂಬಿಕೆಯೇ ಇಲ್ಲ. ಸಮಾಜದಲ್ಲಿ ಅಪನಂಬಿಕೆ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕೆಲಸ. ಆದರೆ ಬಿಜೆಪಿ ಪಕ್ಷದವರು ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವುದೇ ಕಾಯಕವನ್ನಾಗಿಸಿಕೊಂಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಜಾಗದಲ್ಲಿ ಸಿಸಿ ಕ್ಯಾಮೆರಾ ಇದೆ. ಘಟನೆಯ ಸತ್ಯಾಂಶದ ಬಗ್ಗೆ ಪೊಲೀಸರು ಜನರ ಮುಂದೆ ಇಡಬೇಕು. ಘಟನೆ ನಡೆದ 15 ದಿನದಲ್ಲಿ ಮತ್ತೊಂದು ಕಥೆಯನ್ನು ಹುಟ್ಟು ಹಾಕಬಾರದು ಎಂದರು.










