ಚಿಕ್ಕಬಳ್ಳಾಪುರ : ಹಿರಿಯ ನಟ ಜಗ್ಗೇಶ್ ಅವರ ಪುತ್ರ ಯತಿರಾಜ್ ಇದ್ದ ಕಾರು ಅಪಘಾತಕ್ಕೀಡಾಗಿದೆ.
ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಲಗುರ್ಕಿ ಬೈ ಪಾಸ್ ಬಳಿ ಅಪಘಾತ ಸಂಭವಿಸಿದೆ. ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಿಎಂಡಬ್ಲ್ಯೂ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಅದೃಷ್ಟವಶಾತ್ ಯತಿರಾಜ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಯತಿರಾಜ್ ಅವರನ್ನು ರಕ್ಷಣೆ ಮಾಡಿದ್ದಾರೆ.
ಅಪಘಾತ ಬಗ್ಗೆ ನಟ ಜಗ್ಗೇಶ್ ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದು, ಕೊರೊನಾ ಬಂದಾಗಿನಿಂದ ಹೊರ ಹೋಗಿಲ್ಲಾ ಹೋಗಿಬರುತ್ತೇನೆ ಎಂದು ಅವನ ಅಮ್ಮನಿಗೆ ಹೇಳಿ ಯತಿರಾಜ್ ಹೊರಹೋಗಿದ್ದ. ಅವನ ಇಷ್ಟದ ರಸ್ತೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆ ಬಿದ್ದು ಅಪಘಾತವಾಗಿದೆ. ನಾನು ನಂಬಿರುವ ಗುರುರಾಯರ ಆಶೀರ್ವಾದ, ಶ್ರೀರಕ್ಷೆ ನನ್ನ ಮೇಲಿದೆ, ಪವಾಡ ರೀತಿಯಲ್ಲಿ ನನ್ನ ಮಗ ಯತಿರಾಜು ಒಂಚೂರು ಗಾಯ ಸಹ ಆಗದೆ ಪಾರಾಗಿದ್ದಾನೆ ಎಂದು ಬರೆದುಕೊಂಡಿದ್ದಾರೆ.










