ಬಾಗಲಕೋಟೆ : ಜೈಲಿನಿಂದ ಜಾಮೀನು ಪಡೆದು ಬಂದು ಪತಿಯೇ ತನ್ನ ಪತ್ನಿಯನ್ನು ಗುದ್ದಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸಂಗಾನಟ್ಟಿ ಗ್ರಾಮದಲ್ಲಿ ನಡೆದಿದೆ. ಸುಮಿತ್ರಾ ಉಳ್ಳಾಗಡ್ಡಿ(48) ಮೃತ ದುದೈವಿ ಹಾಗೂ ಆರೋಪಿ ಪತಿಯನ್ನು ಮಲ್ಲಪ್ಪ ಉಳ್ಳಾಗಡ್ಡಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಹಾಗೂ ಗ್ರಾಮದ ಶ್ರೀಶೈಲ ಎಂಬ ವ್ಯಕ್ತಿಯ ನಡುವೆ ಅನೈತಿಕ ಸಂಬಂಧ ಇದೆ ಎಂದು ಶಂಕಿಸಿ 2017 ರಲ್ಲಿ ಜಗಳವಾಗಿತ್ತು. ಇದೇ ಕಾರಣಕ್ಕೆ ಮಲ್ಲಪ್ಪ ಶ್ರೀಶೈಲ ಎಂಬಾತನಿಗೆ ಹೊಡೆದು ಕೊಲೆ ಯತ್ನ ನಡೆಸಿರುವುದಾಗಿ ಪತ್ನಿಯೇ ಗಂಡನ ವಿರುದ್ಧ ನ್ಯಾಯಲಯದಲ್ಲಿ ಸಾಕ್ಷಿ ಹೇಳಿದ್ದರು. ಈ ಕಾರಣದಿಂದಾಗಿ ಪತಿ ಮಲ್ಲಪ್ಪ ಉಳ್ಳಾಗಡ್ಡಿ ಅವರು ಜಾಮೀನು ಪಡೆದು ಜೈಲಿನಿಂದ ಹೊರ ಬರುತ್ತಿದ್ದಂತೆ ಮನೆಯ ಬಳಿ ಪತ್ನಿಯ ಮುಖ ಹಾಗೂ ತಲೆಯ ಭಾಗಕ್ಕೆ ಗುದ್ದಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಮಹಾಲಿಂಗಾಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










