ಬೆಂಗಳೂರು : ಪತ್ನಿಯ ಕಿರುಕುಳದಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀನಾಥ್(39) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶ ಮೂಲದ ಶ್ರೀನಾಥ್ 2009ರಲ್ಲಿ ರೇಖಾ ಎಂಬುವವರ ಜೊತೆ ವಿವಾಹವಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದರು. ಅಲ್ಲದೇ ಶ್ರೀನಾಥ್ ಅವರು ಬ್ಯಾಂಕ್ನಿಂದ ಲೋನ್ ಪಡೆದು ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಖರೀದಿಸಿ ಪ್ರತಿ ತಿಂಗಳು ಸಾಲವನ್ನು ಕಟ್ಟುತ್ತಾ ಬಂದಿದ್ದರು. ಶ್ರೀನಾಥ್ ಅವರ ಪತ್ನಿ ಐಷರಾಮಿ ಜೀವನವನ್ನು ನಡೆಸುತ್ತಿದ್ದರು. ಅಲ್ಲದೇ ದುಂದುವೆಚ್ಚ ಮಾಡುತ್ತಿದ್ದರು. ಇದನ್ನು ಗಮನಿಸಿದ ಪತಿ ಕಡಿಮೆ ಖರ್ಚು ಮಾಡುವಂತೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ರೇಖಾ ಅವರು ನಿಮ್ಮ ತಂದೆ ತಾಯಿ ಜೊತೆ ಆಸ್ತಿ ಬರೆಸಿಕೊಂಡು ಬನ್ನಿ, ಇಲ್ಲದಿದ್ದರೆ ವಿಚ್ಚೇಧನ ನೀಡುತ್ತೇನೆ ಎಂದು ಪ್ರತಿದಿನ ಮಾನಸಿಕ ಕಿರುಕಳ ನೀಡುತ್ತಿದ್ದರು. ಇದರಿಂದ ಬೇಸತ್ತ ಶ್ರೀನಾಥ್ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಬೆಳ್ಳಂದೂರು ಠಾಣಾ ಪೊಲೀಸರು ಪತ್ನಿ ರೇಖಾ ಹಾಗೂ ಆಕೆಯ ಪೋಷಕರ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಹಾಗೂ ಐಪಿಸಿ ಸೆಕ್ಷನ್ 34 (ಅಪರಾಧಿಕ ಸಂಚು) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.










