ಇಟಾನಗರ : ಏಳು ಮಂದಿ ವಿಚಾರಣಾಧೀನ ಕೈದಿಗಳು ಸೆಕ್ಯುರಿಟಿ ಗಾರ್ಡ್ ಗಳ ಮುಖಕ್ಕೆ ಖಾರದ ಪುಡಿ ಎರಚಿ ಜೈಲಿನಿಂದ ಪರಾರಿಯಾಗಿರುವ ಘಟನೆ ಅರುಣಾಚಲ ಪೂರ್ವ ಸಿಯಾಂಗ್ ಜಿಲ್ಲೆಯ ಪಾಸಿಘಾಟ್ ಜೈಲಿನಲ್ಲಿ ನಡೆದಿದೆ.
ಭಾನುವಾರ ರಾತ್ರಿ ಊಟದ ಸಮಯದಲ್ಲಿ ಜೈಲಿನ ಗೇಟ್ ಗಳನ್ನು ತೆರೆಯಲಾಗಿತ್ತು. ಇದೇ ಸಮಯವನ್ನು ಸುದುಪಯೋಗ ಮಾಡಿಕೊಂಡ 7 ಕೈದಿಗಳು ಜೈಲು ಸಿಬ್ಬಂದಿ ಮುಖಕ್ಕೆ ಖಾರದ ಪುಡಿ ಎರಚಿದ್ದಾರೆ. ಈ ದಾಳಿಯಲ್ಲಿ ಐದಕ್ಕೂ ಹೆಚ್ಚು ಸೆಕ್ಯುರಿಟಿ ಗಾರ್ಡ್ ಗಳಿಗೆ ಗಾಯಗಳಾಗಿವೆ. ಪರಾರಿಯಾಗಿರುವ ಕೈದಿಗಳ ಮಾಹಿತಿಯನ್ನು ಎಲ್ಲ ಪೊಲೀಸ್ ಠಾಣೆಗಳಿಗೂ ಕಳುಹಿಸಲಾಗಿದ್ದು, ಅವರನ್ನು ಹುಡುಕಲು ಪೊಲೀಸರು ಮುಂದಾಗಿದ್ದಾರೆ.










