ರಾಮನಗರ : ಪೋಷಕರೊಂದಿಗೆ ಮಲಗಿದ್ದ ಮೂರು ವರ್ಷದ ಮಗುವನ್ನು ಚಿರತೆಯೊಂದು ಹೊತ್ತೊಯ್ದು ತಿಂದು ಸಾಯಿಸಿರುವ ಮನಕಲಕುವ ಘಟನೆ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕದರಯ್ಯನ ಪಾಳ್ಯದಲ್ಲಿ ನಡೆದಿದೆ. ಹೇಮಂತ್(3) ಮೃತ ಮಗು ಎಂದು ಗುರುತಿಸಲಾಗಿದ್ದು, ಮೃತ ಮಗು ನಿನ್ನೆ ರಾತ್ರಿ ತನ್ನ ತಂದೆ ತಾಯಿಯೊಂದಿಗೆ ಮಲಗಿತ್ತು. ರಾತ್ರಿ ಸೆಕೆ ಹೆಚ್ಚಾಗಿದ್ದರಿಂದ ಬಾಗಿಲನ್ನು ತೆಗೆದು ಮಲಗಿದ್ದರು. ಈ ವೇಳೆ ಮನೆ ಒಳಗೆ ನುಗ್ಗಿದ ಚಿರತೆ ಮಗುವನ್ನು ಹೊತ್ತೊಯ್ದು ಅರಣ್ಯ ಪ್ರದೇಶದತ್ತ ತೆಗೆದುಕೊಂಡು ಹೋಗಿ ಅರ್ಧ ತಿಂದು ಅರ್ಧ ದೇಹವನ್ನು ಅರಣ್ಯದಲ್ಲೇ ಬಿಟ್ಟು ಹೋಗಿದ್ದು, ಬಳಿಕ ಪೋಷಕರು ಮಗು ಕಾಣಿಸುತ್ತಿಲ್ಲ ಎಂದು ಮನೆಯೆಲ್ಲಾ ಹುಡುಕಾಡಿದ್ದಾರೆ. ಬಳಿಕ ಮನೆಯಿಂದ ಹೊರಗೆ ಹುಡುಕಾಡಿದಾಗ ಮನೆ ಬಳಿ ಇದ್ದ ಕಾಡಿನಲ್ಲಿ ಮಗುವಿನ ಅರ್ಧ ದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










