ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ…

40
firstsuddi

ಹಾಸನ: ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಯುವತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ, ಶಾಂತಿಗ್ರಾಮದಲ್ಲಿ ನಡೆದಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ, ಅಕ್ಕನಹಳ್ಳಿಕೂಡು ಗ್ರಾಮದ ಅಮೃತ (19) ಮೃತ ಯುವತಿ. ಹಾಸನದ ಗೋಕುಲದಾಸ್ ಗಾರ್ಮೆಂಟ್ಸ್ ಕೆಲಸಕ್ಕೆ ಬರುತ್ತಿದ್ದ ಅಮೃತ ಹಿರಿಸಾವೆ ಹೋಬಳಿ, ಮಸಕನಹಳ್ಳಿ ಗ್ರಾಮದ ದಿಲೀಪ್ ಎಂಬಾತನನ್ನು ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇಬ್ಬರ ಪ್ರೀತಿಯ ವಿಚಾರ 2 ತಿಂಗಳ ಹಿಂದೆ ಅಮೃತ ಪೋಷಕರಿಗೆ ತಿಳಿದಿದ್ದು, ಮಾ.11 ರಂದು ದಿಲೀಪ್‌ನನ್ನು ಯುವತಿಯ ಮನೆಗೆ ಬರಲು ಹೇಳಿದ್ದರು. ಆದರೆ ದಿಲೀಪ್ ನುಗ್ಗೇಹಳ್ಳಿಯಲ್ಲಿ ಅಮೃತಳಾನ್ನು ಭೇಟಿಯಾಗಿ, ಮದುವೆಯಾಗಲು ಸಾಧ್ಯವಿಲ್ಲ. ನನಗೂ ನಿನಗೂ ಸಂಬಂಧವಿಲ್ಲ. ನಮ್ಮಿಬ್ಬರ ಜಾತಿ ಬೇರೆ-ಬೇರೆ ಎಂದು ಏರುಧ್ವನಿಯಲ್ಲಿ ಹೇಳಿ ಅಲ್ಲಿಂದ ವಾಪಸ್ಸಾಗಿದ್ದಾನೆ.

ನಂತರ ಅಮೃತ ಕೆಲಸಕ್ಕಾಗಿ ಹಾಸನದ ಬಸ್ ಹತ್ತಿ ಬಂದಿದ್ದರು. ಅಲ್ಲಿಂದ ತಾನು ಕೆಲಸಕ್ಕೆ ಬರುವುದಿಲ್ಲ ಎಂದು ಸ್ನೇಹಿತೆಗೆ ತಿಳಿಸಿ ಶಾಂತಿಗ್ರಾಮದಲ್ಲಿ ಬಸ್ ಇಳಿದಿದ್ದರು. ಸಂಜೆ ಅಮೃತ ಮನೆ ಬಾರದೇ ಫೋನ್ ಸಹ ಸಂಪರ್ಕಕ್ಕೆ ಸಿಗದಿದ್ದಾಗ ಆತಂಕಗೊಂಡ ಕುಟುಂಬಸ್ಥರು ನುಗ್ಗೇಹಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಗುರುವಾರ ಶಾಂತಿಗ್ರಾಮ ಕೆರೆಯಲ್ಲಿ ಶವ ಪತ್ತೆಯಾಗಿದ್ದು, ಪ್ರೀತಿ ಕೈಕೊಟ್ಟ ಹಿನ್ನಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪಿ ದಿಲೀಪ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.