ಬಿಜೆಪಿಯ ಮಾನ ಹರಾಜು ಹಾಕಲು ನಳಿನ್ ಕುಮಾರ್ ಕಟೀಲ್ ಒಬ್ಬರೇ ಸಾಕು : ಕಾಂಗ್ರೆಸ್.

146
firstsuddi

ಬೆಂಗಳೂರು : ಬಿಜೆಪಿಯ ಮಾನ ಹರಾಜು ಹಾಕಲು ನಳಿನ್ ಕುಮಾರ್ ಕಟೀಲ್ ಒಬ್ಬರೇ ಸಾಕು ಎಂದು ಕಾಂಗ್ರೆಸ್ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕರ್ನಾಟಕ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ..? ಏನಾಗುತ್ತದೆ ಎನ್ನುವ ಗಾದೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕಾಮಿಡಿ ಆಕ್ಟರ್ ನಳೀನ್ ಕುಮಾರ್ ಕಟೀಲ್ ಸಾಕ್ಷಿ. ಇವರ ಮಾತಲ್ಲಿ ಘನತೆ,ಗೌರವ, ಬದ್ಧತೆ, ಯಾವುದೂ ಇಲ್ಲ. ಸರ್ವಜನಾಂಗದ ನಾಯಕ, ಹಣಕಾಸು ತಜ್ಞ,168 ಯೋಜನೆಗಳನ್ನ ಘೋಷಿಸಿ ಜಾರಿಗೊಳಿಸಿ ನುಡಿದಂತೆ ನೆಡೆದ ನಾಯಕ ಸಿದ್ದರಾಮಯ್ಯ.

ಒಂದು ಪಂಪ್ ವೆಲ್ ಮೇಲ್ಸೇತುವೆಯನ್ನ ಸಮಯಕ್ಕೆ ಮುಗಿಸಲಾಗದ ನಳೀನ್ ಕುಮಾರ್ ಕಟೀಲ್ ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ನಮ್ಮ ಪ್ರತಿ ಕಾರ್ಯಕರ್ತರಲ್ಲೂ ಸಿದ್ದರಾಮಯ್ಯನವರ ಬಗ್ಗೆ ಅದಮ್ಯವಾದ ಗೌರವವಿದೆ.

ನಳೀನ್ ಕುಮಾರ್ ಕಟೀಲ್ ಅವರೇ ತಾವು ಪದೇ ಪದೇ ಅವಹೇಳನ ಮಾಡುತ್ತಿರುವ ಬಸನಗೌಡ ಪಾಟೀಲ್ ಅವರಿಗೆ ಕನಿಷ್ಠ ನೋಟಿಸನ್ನೂ ಕೊಡದಿದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮುಖ್ಯಮಂತ್ರಿ ಭೇಟಿಗೆ ಸಣ್ಣ ಸಮಯ ಕೊಡದಿದ್ದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಯಾವ ಪಾಡಿನಲ್ಲಿದ್ದಾರೆ ಎಂದು ಸೂಚಿಸುತ್ತದೆ, ಪಕ್ಷ ಕಟ್ಟಿದ ಅವರನ್ನ ಚೆನ್ನಾಗಿ ನೋಡಿಕೊಳ್ಳಿ.

ನಳೀನ್ ಕುಮಾರ್ ಕಟೀಲ್ ಅವರೇ ತಮ್ಮ ನಡೆ-ನುಡಿ ಮೂಲಕ ತಾನೊಬ್ಬ ಅಪ್ರಬುದ್ಧ, ಅನಾಗರಿಕ, ಸಡಿಲ ನಾಲಿಗೆಯ ಯಕಶ್ಚಿತ್ ರಾಜಕಾರಣಿ ಎಂದು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ, ಬಿಜೆಪಿಯ ಮಾನ ಹರಾಜು ಹಾಕಲು ನಳಿನ್ ಕುಮಾರ್ ಕಟೀಲ್ ಒಬ್ಬರೇ ಸಾಕು. ಅವರು ಇದೇ ರೀತಿ ಮಾತನಾಡುತ್ತಾ ಬಿಜೆಪಿಯ ಬಣ್ಣ ಬಯಲು ಮಾಡುತ್ತಲೇ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.