ಮೂಡಿಗೆರೆ: ಲೋಕಸಭಾ ಚುನಾವಣೆ ಸಮೀಪಿಸುತ್ತಿದಂತೆ ಒಂದೆಡೆ ವಿವಿಧ ಪಕ್ಷಗಳು ಮತಯಾಚನೆಯಲ್ಲಿ ತೊಡಗಿದ್ದರೆ ಖಾಸಗಿ ಬಸ್ ಮಾಲೀಕರ ಸಂಘ ಪ್ರಜಾಪ್ರಭುತ್ವ ಹಬ್ಬ ಎಂಬ ಶೀರ್ಷಿಕೆಯಡಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.
ಪ್ರಯಾಣ ಮಾಡುವಾಗ ಟಿಕೆಟ್ ಅನಿವಾರ್ಯ ಚುನಾವಣೆ ನಡೆಯುವಾಗ ಮತದಾನ ಅಗತ್ಯ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದು ಖಾಸಗಿ ಬಸ್ಗಳಲ್ಲಿ ಮತದಾನ ಜಾಗೃತಿಯ ಬಿತ್ತಿಪತ್ರಗಳು ರಾರಾಜಿಸುತ್ತಿವೆ.
ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಚಾಲಕ ಮತ್ತು ನಿರ್ವಾಹಕರು ಅರಿವು ಮೂಡಿಸುತ್ತಿದ್ದಾರೆ. ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಮತದಾರನ ಆದ್ಯ ಕರ್ತವ್ಯವಾಗಿದ್ದು ಮತದಾನ ಮಾಡಿದಾಗ ಮಾತ್ರ ಜನಪ್ರತಿನಿಧಿಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಾಗ ಪ್ರಶ್ನಿಸುವ ಹಕ್ಕು ಇರುತ್ತದೆ. ಆದರಿಂದ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕು ಎನ್ನುತ್ತಾರೆ ಬಸ್ ಚಾಲಕ ಚಂದ್ರು ಕೊಟ್ಟಿಗೆಹಾರ.

ಚುನಾವಣಾ ಆಯೋಗ, ಶಿವಮೊಗ್ಗ ಜಿಲ್ಲಾಡಳಿತ, ಹಾಗೂ ಖಾಸಗಿ ಬಸ್ ಮಾಲೀಕರ ಸಂಘ ಜಂಟಿಯಾಗಿ ಮತದಾನ ಜಾಗೃತಿಗಾಗಿ ಶ್ರಮಿಸುತ್ತಿದ್ದು ಇದಕ್ಕೆ ಸಾರ್ವಜನಿಕರು ಮತ್ತು ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.










