ಮೂಡಿಗೆರೆ : ಪ್ರೇಯಸಿ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂದು ಮನನೊಂದು ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕಳಸ ಸಮೀಪದ ಹಿರೇಬೈಲು ಗ್ರಾಮದ ಕೋರೆ ಎಂಬಲ್ಲಿ ನಡೆದಿದೆ. ಸತೀಶ್(29) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ ಎಂದು ಗುರುತಿಸಲಾಗಿದ್ದು, ಬಸರಿಕಟ್ಟೆಯ ಹೊನ್ನೆಗುಂಡಿ ನಿವಾಸಿ ಸತೀಶ್ ಅವರು ಸಂದ್ಯ(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ಕಳೆದ 3ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಲ್ಲದೇ ಸತೀಶ್ ಅವರು ಸಂದ್ಯ ಅವರನ್ನು ನರ್ಸಿಂಗ್ ಓದಿಸುತ್ತಿದ್ದರು. ಬಳಿಕ ಸಂದ್ಯ ಅವರು ನರ್ಸಿಂಗ್ ಮುಗಿಸಿ ಬೇರೆ ಕಡೆ ತರಭೇತಿಗಾಗಿ ತೆರಳಿದ್ದು, ಈ ವೇಳೆ ಸತೀಶ್ ಅವರು ಸಂದ್ಯ ಅವರಿಗೆ ಕರೆ ಮಾಡುತ್ತಿದ್ದರು. ಆದರೆ ಸಂದ್ಯ ಅವರು ಸತೀಶ್ ಅವರ ಕರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಸಂದ್ಯ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ. ಅವರು ಬೇರೆಯವರನ್ನು ಪ್ರೀತಿಸುತ್ತಿರಬಹುದು ಎಂದು ಸ್ವತಃ ತಾನೇ ಊಹಿಸಿ ತನ್ನ ಮೊಬೈಲ್ನಲ್ಲಿ “ನನ್ನ ಸಾವಿಗೆ ಸಂದ್ಯನೇ ಕಾರಣ. ದಯವಿಟ್ಟು ಇವಳಿಗೆ ತಕ್ಕ ಶಿಕ್ಷೆ ಆಗಲೇಬೇಕು..ನಮ್ಮ ಮನೆಯವರಿಗೆ ಏನು ಹೇಳಿಲ್ಲ. ದಯವಿಟ್ಟು ಎಲ್ಲಾ ವಿಷಯವನ್ನು ಹೇಳಿ. ಹಿರೇಬೈಲ್ನಲ್ಲಿ ಸುಸೈಡ್ ಮಾಡಿಕೊಳ್ಳುತ್ತೀನಿ. 3ವರ್ಷ ಸಂದ್ಯಗೆ ನರ್ಸಿಂಗ್ ಮಾಡಿಸಿದೆ ” ಎಂದು ಸ್ನೇಹಿತರಿಗೆ ಡೆತ್ ನೋಟ್ ಸಂದೇಶ ರವಾನಿಸಿ ಹಿರೇಬೈಲು ಗ್ರಾಮದ ಕೋರೆ ಎಂಬಲ್ಲಿ ಹುಡುಗಿಯ ಸಂಬಂದಿಕರ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದು, ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










