ಹಾವೇರಿ : ವರದಾ ನದಿಯಲ್ಲಿ ಎತ್ತನ್ನು ತೊಳೆಯುತ್ತಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದು ಮುಳುಗುತ್ತಿದ್ದ ಬಾಲಕನನ್ನು ಅಜ್ಜ ರಕ್ಷಣೆ ಮಾಡಲು ಹೋಗಿ ಇಬ್ಬರು ನೀರು ಪಾಲಾಗಿರುವ ಘಟನೆ ತಾಲ್ಲೂಕಿನ ಹಂದಿಗನೂರ ಗ್ರಾಮದಲ್ಲಿ ನಡೆದಿದೆ. ಪರಮೇಶಪ್ಪ(62), ಪ್ರಶಾಂತ(16) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಪ್ರಶಾಂತ ತನ್ನ ಸಂಬಂಧಿಕರ ಜೊತೆ ಎತ್ತನ್ನು ತೊಳೆಯಲೆಂದು ನದಿಗೆ ತೆರಳಿದ್ದ. ಈ ವೇಳೆ ಆಯತಪ್ಪಿ ನೀರಿಗೆ ಬಿದ್ದು ಮುಳುಗುತ್ತಿದ್ದನ್ನು ಕಂಡ ಪರಮೇಶಪ್ಪ ಅವರು ಆತನ ರಕ್ಷಣೆಗೆ ನೀರಿಗೆ ಧುಮುಕಿದ್ದು, ನೀರಿನ ರಭಸ ಹೆಚ್ಚಿದ್ದರಿಂದ ಇಬ್ಬರು ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ಸದ್ಯ ಪರಮೇಶಪ್ಪ ಅವರ ಮೃತದೇಹ ಸಿಕ್ಕಿದ್ದು, ಪ್ರಶಾಂತನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಗುತ್ತಲ ಪೊಲೀಸ್ ಠಾನಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










