ಹಾಸನ ಸಕಲೇಶಪುರದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಆನೆ ಸಾವು.

24

ಹಾಸನ: ಸಕಲೇಶಪುರ ತಾಲೂಕಿನ ಬನವಾಸೆ ಗ್ರಾಮದ ಬಳಿ ಕಾಡಾನೆಯೊಂದು ಮೃತಪಟ್ಟಿದೆ. ಗ್ರಾಮದ ಬಿಎಸ್‍ಎನ್‍ಎಲ್ ಟವರ್ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಅಂದಾಜು 25 ವರ್ಷದ ಒಂಟಿಸಲಗ ಸಾವಿಗೀಡಾಗಿದೆ. ಆನೆ ಆಹಾರ ಅರಸಿ ಗ್ರಾಮದ ಬಳಿ ಬಂದಿತ್ತು. ಈ ವೇಳೆ ವಿದ್ಯುತ್ ತಂತಿಗೆ ಆನೆಯ ಸೊಂಡಿಲು ತಾಗಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದಡೆ ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಭತ್ತ ನಾಶವಾಗಿದೆ. ಇದೇ ಸಕಲೇಶಪುರ ತಾಲೂಕಿನ ಮಲಗಳ್ಳಿ ಗ್ರಾಮದ ಭತ್ತದ ಗದ್ದೆಗಳಿಗೆ ಇಂದು ಮುಂಜಾನೆ ಕಾಡಾನೆಗಳ ಹಿಂಡು ನುಗ್ಗಿದೆ. ಆನೆಗಳು ಭತ್ತದ ಬೆಳೆಯನ್ನು ತುಳಿದು, ತಿಂದು ನಾಶ ಮಾಡಿವೆ. ಗ್ರಾಮದ ಹೂವಣ್ಣ, ರುದ್ರಯ್ಯ, ಚಿನ್ನಪ್ಪ, ಹೇಮಂತ್, ಉಮೇಶ್ ಎಂಬುವವರಿಗೆ ಸೇರಿದ ಭತ್ತದ ಗದ್ದೆಗಳು ಸಂಪೂರ್ಣ ನಾಶವಾಗಿವೆ. ರೈತರು ಸಾಲ ಮಾಡಿ ಭತ್ತ ನಾಟಿ ಮಾಡಿದ್ದರು. ಆದರೆ, ಕಾಡಾನೆಗಳ ದಾಳಿಯಿಂದ ಫಸಲಿಗೆ ಬಂದಿದ್ದ ಭತ್ತದ ನಾಶವಾಗಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಕಾಡಾನೆ ಹಾವಳಿಗೆ ಬ್ರೇಕ್ ಹಾಕದ ಸರ್ಕಾರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡುವಂತೆ ಆಗ್ರಹಿಸಿದರು.