ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ
ಹೊಸಪೇಟೆ : ಇಂದು ನಡೆಯಲಿರುವ ರಾಜ್ಯದ ರೈತ ಮತ್ತು ಕಾರ್ಮಿಕರ ಜಂಟಿ ಹೋರಾಟದ ಕರ್ನಾಟಕ ಬಂದ್ಗೆ ಕರ್ನಾಟಕ ರಾಜ್ಯ ಹಸಿರು ಸೇನೆ, ಕರ್ನಾಟಕ ರಾಜ್ಯ ರೈತ ಸಂಘ, ಕಾರ್ಮಿಕ ಸಂಘದ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಕೊಟಗಿ ಲೋಕೇಶ ಮಾತನಾಡಿ, ಮತ ಹಾಕುವಾಗ ಮಾತ್ರ ಈ ದೇಶದ ಪ್ರಜೆಗಳು ಬೇಕು, ಒಂದು ಕಾಯ್ದೆಯನ್ನು ತಿದ್ದುಪಡಿಯನ್ನು ತರುವಾಗ ಪ್ರಜೆಗಳ ಅಥವಾ ನಾಗರಿಕರ ಅಭಿಪ್ರಾಯಗಳುನ್ನು ಕೇಳುವ ಔದಾರ್ಯ ಇಲ್ಲವಾದರೇ, ಮುಂದಿನ ದಿನಗಳಲ್ಲಿ ನಾಗರಿಕರು ಜನಪರ ವಿರೋಧಿ ಸರಕಾರಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ. ಕಾರ್ಮಿಕ ಕಾಯ್ದೆ ತಿದ್ದುಪಡಿಗಳು ಕಾರ್ಮಿಕರನ್ನು ಜೀತದಾಳುಗಳನ್ನಾಗಿ ಮಾಡುತ್ತದೆ ಎಂಬುದನ್ನು ರೈತ, ಕಾರ್ಮಿಕ ಮತ್ತು ಜನಸಾಮಾನ್ಯರು ಮರೆಯಬಾರದು ಎಂದರು.
ಕಾರ್ಪೊರೇಟ್ ದೈತ್ಯ ಕಂಪನಿಗಳು ಕ್ರೃಷಿ ಮಾರುಕಟ್ಟೆ ಆಕ್ರಮಣ ಮಾಡಲು ಅವಕಾಶ ನೀಡಿರುವುದನ್ನು ಖಂಡಿಸಿ ಹಾಗೂ ಕ್ರೃಷಿ ಮುಂಗಡ ವ್ಯಾಪಾರ ವಹಿವಾಟು ನಡೆಸಲು ಕಂಪನಿಗಳಿಗೆ ಅವಕಾಶ ನೀಡಿರುವುದು ಹಾಗೂ ಅಗತ್ಯ ವಸ್ತುಗಳನ್ನು ಅಗತ್ಯ ವಸ್ತುಗಳ ಕಾಯ್ದೆಯಿಂದ ಹೊರಗೆ ಇಟ್ಟಿರುವ ತಿದ್ದುಪಡಿ ಕಾಯ್ದೆಯಿಂದ ಕಂಪನಿಗಳಿಗೆ ಲಾಭ ಪಡೆಯಲು ಅನುಕೂಲ ಮಾಡಿಕೊಡುವ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಯಿಂದಾಗಿ ರೈತರು ತಮ್ಮ ಜನ ಸಾಮಾನ್ಯರು ಮುಂಬರುವ ದಿನಗಳಲ್ಲಿ ಆಹಾರದ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ, 2020ರ ಭೂ ಸುಧಾರಣ ಕಾಯ್ದೆ, ಅಗತ್ಯ ಆಹಾರ ಸರಕುಗಳ ತಿದ್ದುಪಡಿ ಕಾಯ್ದೆ, ವಿದ್ಯುತ್ ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಲು ಒತ್ತಾಯಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಸೆ.28ರ ಸೋಮವಾರದಂದು ಕರ್ನಾಟಕ ಬಂದ್ಗೆ ವಿವಿಧ ಕಾರ್ಮಿಕ ಹಾಗೂ ರೈತ ಸಂಘಟನೆಗಳ ಕರೆ ಕೊಟ್ಟಿವೆ ಎಂದರು.
ಕಾರ್ಯಕ್ರಮದಲ್ಲಿ ಮರಿಯಮ್ಮನಹಳ್ಳಿಯ ಹೋಬಳಿಯ ವರ್ತಕರ ಸಂಘದ ಗೌರವ ಅಧ್ಯಕ್ಷ ಡಿ ರಾಘವೇಂದ್ರ ಶೆಟ್ಟಿ ಮಾತನಾಡಿದರು.
ಬೆಂಬಲ: ಸವಿತ ಸಮಾಜ, ಜವಳಿ ವರ್ತಕರು, ಕರ್ನಾಟಕ ರಕ್ಷಣ ವೇದಿಕೆ, ದಲಿತ ಸಂಘರ್ಷ ಸಮಿತಿ, ಆಟೋ ಚಾಲಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಬೆಂಬಲ ಸೂಚಿಸಿವೆ.
ಈ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ಹೋಬಳಿಯ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಈಡಿಗರ ರಮೇಶ್, ಮಡಿವಾಳರ ಭರತ್, ಕರ್ನಾಟಕ ರಾಜ್ಯ ರೈತಸಂಘ (ಹುಚ್ಚವನಹಳ್ಳಿ ಮಂಜುನಾಥಬಣ) ಹೊಸಪೇಟೆ ತಾಲೂಕು ಅಧ್ಯಕ್ಷ ಎಂ.ಪ್ರಕಾಶ್, ವರ್ತಕರ ಸಂಘದ ಅಧ್ಯಕ್ಷ ಉಪ್ಪಾರ ಶ್ರೀರಾಮ್, ಮಾಜಿ ಜಿ.ಪಂ ಸದಸ್ಯ ಗೋವಿಂದರ ಪರಶುರಾಮ್, ಮಾಜಿ ತಾ.ಪಂ ಸದಸ್ಯ ಉಪ್ಪಾರ ಸೋಮಪ್ಪ ಪ.ಪಂ ಸದಸ್ಯ ವಸ್ತ್ರದ ಆನಂದ, ಬುಡೇನ್ ಸಾಬ್, ಲಲಿತ ಕಲಾ ರಂಗದ ಅಧ್ಯಕ್ಷ ಉರುಕೊಳ್ಳಿ ಮಂಜುನಾಥ, ರೈತ ಕಾರ್ಮಿಕ ರಕ್ಷಣ ವೇದಿಕೆಯ ಜಿಲ್ಲಾಧ್ಯಕ್ಷ ಲಾಲ್ಯ ನಾಯ್ಕ್, ಮುಖಂಡರಾದ ಎಲ್ ಜಗನ್ನಾಥ, ಹೆಚ್.ನಾಗಪ್ಪ ಹಾಗೂ ಇತರರು ಇದ್ದರು.










