64 ನೇ ಕನ್ನಡ ರಾಜ್ಯೋತ್ಸವ ಆಚರಿಸಿದ ದುಬೈ ಅನಿವಾಸಿ ಕನ್ನಡಿಗರ ಒಕ್ಕೂಟ… 

206
firstsuddi

ದುಬೈ : ಕಳೆದೆರಡು ವರ್ಷಗಳಿಂದ ಕನ್ನಡದ ಕಂಪನ್ನು ಹರಡುವಲ್ಲಿ ತನ್ನ ಅಸ್ಥಿತ್ವವನ್ನು ಕಾಯ್ದುಕೊಂಡಿರುವ ಅನಿವಾಸಿ ಕನ್ನಡಿಗರ ಒಕ್ಕೂಟ, ದುಬೈಯ ವತಿಯಿಂದ 64 ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದುಬೈಯ ಮುಶ್ರಿಫ್ ಪಾರ್ಕ್ ನಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅನಿವಾಸಿ ಕನ್ನಡಿಗರ ಒಕ್ಕೂಟ ದುಬೈ ಯ ಅಧ್ಯಕ್ಷರಾದ ಶಂಸುದ್ದೀನ್ ಉಡುಪಿ ಕರ್ನಾಟಕ ರಾಜ್ಯ ರೂಪುಗೊಂಡ ಬಗೆ, ಕರ್ನಾಟಕದ ಸವಿಶೇಷತೆಯ ಬಗ್ಗೆ ಮಾತನಾಡುತ್ತಾ ಕನ್ನಡ ಸಂಸ್ಕೃತಿ, ಕನ್ನಡ ಭಾಷೆಯ ಮಹತ್ವವನ್ನು ಸಭಿಕರಿಗೆ ವಿವರಿಸಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾದ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಹಗ್ಗಜಗ್ಗಾಟ ಹಾಗೂ ಕನ್ನಡ ಪ್ರಶ್ನೋತ್ತರ ಸ್ಪರ್ಧೆಗಳಲ್ಲಿ ಸುಮಾರು ಐವತ್ತಕ್ಕೂ ಮಿಕ್ಕಿ ಅನಿವಾಸೀ ಕನ್ನಡಿಗರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ ಯು.ಎ.ಇ ಯ ಗೌರವಾಧ್ಯಕ್ಷರಾದ ಜಾವೇದ್ ಮಂಗಳೂರು ಮಾತನಾಡುತ್ತಾ ಕರ್ನಾಟಕದ ಇತಿಹಾಸ ಹಾಗೂ ಈಗಿನ ಆಗುಹೋಗುಗಳ ಬಗ್ಗೆ ವಿವರಿಸುತ್ತಾ ಗಲ್ಫ್ ರಾಷ್ಟದಲ್ಲಿ ದುಡಿಯುತ್ತಿರುವ ಅನಿವಾಸಿ ಕನ್ನಡಿಗರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಗ್ರಾಮೀಣ ಕ್ರೀಡೆಗಳಿಗೂ ಒತ್ತು ನೀಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮವನ್ನು ನಿರೂಪಿಸಿದ ಇರ್ಫಾನ್ ಕಲ್ಲಡ್ಕ ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದ ಎಲ್ಲಾ ಸ್ವಯಂ ಸೇವಕರಿಗೂ ಅಭಿನಂಧನೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕರ್ಣಾಟಕದ ಅನಿವಾಸಿ ಯುವಕರೂ, ಮಕ್ಕಳೂ ಸೇರಿದಂತೆ ಅನಿವಾಸೀ ಕನ್ನಡಿಗರ ಒಕ್ಕೂಟ ದುಬೈ ಯ ಪಾದಾಧಿಕಾರಿಗಳಾದ ಅಕ್ಬರ್ ಅಲೀ ಸುರತ್ಕಲ್, ರಿಯಾಝ್ ಜೋಕಟ್ಟೆ, ಶಂಸುದ್ದೀನ್ ಉಪ್ಪಿನಂಗಡಿ ಹಾಗೂ ಫಾರೂಖ್ ಮೂರ್ಜೆ ಉಪಸ್ಥಿತರಿದ್ದರು.