ಚಿಕ್ಕಮಗಳೂರು : ವಿದ್ಯೆ ಯಾರೂ ಕದಿಯಲಾಗದ ಅಮೂಲ್ಯವಾದ ಸಂಪತ್ತು : ಸೋಮಶೇಖರ್…

845
firstsuddi

ಚಿಕ್ಕಮಗಳೂರು : ಗ್ರಾಮೀಣ ಮಕ್ಕಳು ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡುವ ಮೂಲಕ ಶಿಕ್ಷಣವಂತರಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ್ ಸಲಹೆ ಮಾಡಿದರು.
ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮೂಲಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ನಗರ ಹೊರವಲಯದ ತೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿರುವ ಸ್ಮಾರ್ಟ್ ಕ್ಲಾಸ್‍ಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯೆ ಯಾರೂ ಕದಿಯಲಾಗದ ಅಮೂಲ್ಯವಾದ ಸಂಪತ್ತು, ಬಡತನದಿಂದ ಹೊರಬಂದು ಸಮಾಜದಲ್ಲಿ ಸ್ಥಾನ ಮಾನ ಗಳಿಸಬೇಕಾದರೆ ಶಿಕ್ಷಣವಂತರಾಗುವುದು ಅಗತ್ಯ, ಬಡ ಮೀನುಗಾರನ ಮಗ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದಕ್ಕೆ, ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಕ್ಕೆ ಶಿಕ್ಷಣ ಕಾರಣ ಎಂದರು.
ಗ್ರಾಮೀಣ ವಿದ್ಯಾರ್ಥಿಗಳು ಇದನ್ನು ಮನಗಾಣಬೇಕು, ಎಷ್ಟೇ ಕಷ್ಟವಾದರೂ ಬಿಡದೇ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.ಶಾಲೆಯ ಕೊಠಡಿ ದುರಸ್ತಿ ಮತ್ತು ಅಭಿವೃದ್ದಿಗೆ ಅನುದಾನ ಒದಗಿಸುವ ಭರವಸೆ ನೀಡಿದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಮಾತನಾಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಿದ ಶಿಕ್ಷಕರ ಕಾರ್ಯವನ್ನು ಶ್ಲಾಘಿಸುವುದರ ಜೊತೆಗೆ ನೆರವಾದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಶಿಕ್ಷಕ ದಿನೇಶ್ ವಿದ್ಯಾರ್ಥಿಗಳಿಗೆ ಇಂಗ್ಲೀಷ್, ಸಮಾಜ, ವಿಜ್ಞಾನ ಮತ್ತು ಗಣಿತವನ್ನು ಸುಲಭವಾಗಿ ಕಲಿಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಾನಿಗಳ ನೆರವಿನಿಂದ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ತೆರೆಯಲಾಗಿದೆ ಎಂದು ತಿಳಿಸಿದರು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ರೇಣುಕಾ ಅಧ್ಯಕ್ಷತೆ ವಹಿಸಿದ್ದರು, ಗೌರವಾಧ್ಯಕ್ಷ ಲಕ್ಷ್ಮಣರಾಜ್‍ಅರಸ್, ಉಪಾಧ್ಯಕ್ಷ ಶಿವಕುಮಾರ್, ಮುಖ್ಯ ಶಿಕ್ಷಕಿ ಮಾದೇವಿ, ಗ್ರಾ.ಪಂ. ಸದಸ್ಯೆ ಭಾರತಿ, ನಿವೃತ್ತ ಶಿಕ್ಷಕ ಲಕ್ಷ್ಮಣರಾಜು ಉಪಸ್ಥಿತರಿದ್ದರು.
ಶಿಕ್ಷಕರಾದ ಬಿ.ಸಿ.ಮಧು ಕಾರ್ಯಕ್ರಮವನ್ನು ನಿರೂಪಿಸಿದರು, ಮೋಹನ್ ಸ್ವಾಗತಿಸಿದರು, ಎಂ.ಸುಧಾ ವಂದಿಸಿದರು.