ಚಿಕ್ಕಮಗಳೂರು : ಯಾವುದೇ ಸಮುದಾಯ ಹಕ್ಕುಗಳನ್ನು ಪಡೆದುಕೊಳ್ಳಬೇಕಾದರೆ ಆ ವರ್ಗದ ಜನರು ಸಂಘಟಿತರಾಗುವುದು ಅತ್ಯಗತ್ಯ : ಶೂದ್ರ ಶ್ರೀನಿವಾಸ್…

328
firstsuddi

ಚಿಕ್ಕಮಗಳೂರು : ದಲಿತರು ತಮ್ಮ ಸಂವಿಧಾನಬದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕಾದರೆ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶೂದ್ರ ಶ್ರೀನಿವಾಸ್ ಸಲಹೆ ಮಾಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಸಮುದಾಯ ಹಕ್ಕುಗಳನ್ನು ಪಡೆದುಕೊಳ್ಳಬೇಕಾದರೆ ಆ ವರ್ಗದ ಜನರು ಸಂಘಟಿತರಾಗುವುದು ಅತ್ಯಗತ್ಯ, ಎಲ್ಲರೂ ಒಗ್ಗೂಡಿ ಹೋರಾಡಿದರೆ ಮಾತ್ರ ಸರ್ಕಾರದ ಸವಲತ್ತುಗಳು ಸಿಗುತ್ತವೆ ಎಂಬುದನ್ನು ದಲಿತ ವರ್ಗ ಮನಗಾಣಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ದಲಿತ ಪರ ಹೋರಾಟಕ್ಕೆ ಆ ಸಮುದಾಯದ ಎಲ್ಲರೂ ಸಮಿತಿಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶೂದ್ರ ಶ್ರೀನಿವಾಸ್ ಮತ್ತು ಸೇವೆಯಿಂದ ನಿವೃತ್ತರಾದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ಎಲ್.ಆರ್.ಶ್ರೀನಿವಾಸ್ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಸಮಿತಿಯ ಪದಾಧಿಕಾರಿಗಳಾದ ಎಸ್.ಎನ್.ಮಹೇಂದ್ರಸ್ವಾಮಿ, ಬಿ.ರಾಮು, ಆರ್.ಶೇಖರ್, ಗಂಗರಾಜು, ಖಂಡಪ್ಪ, ಸಿದ್ದಪ್ಪ, ಶೇಖರ್,ಅಂತೋಣಿಯಮ್ಮ, ಯಶೋಧಮ್ಮ ಉಪಸ್ಥಿತರಿದ್ದರು.