ಬೆಂಗಳೂರು : ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಗೆ ವಾಹನವೊಂದು ಡಿಕ್ಕಿ ಹೊಡೆದು ಗಂಭೀರ ಗಾಯಗಳಾಗಿರುವ ಘಟನೆ ನಗರದ ವಿಧಾನಸೌಧದ ಪಶ್ಚಿಮ ಧ್ವಾರದ ಬಳಿ ನಡೆದಿದೆ. ವಿಧಾನಸೌಧವನ್ನು ಪ್ರವೇಶಿಸುತ್ತಿದ್ದ ಕೃಷಿ ಇಲಾಖೆಯ ವಾಹನವೊಂದರ ಸ್ಟೇರಿಂಗ್ ಲಾಕ್ ಆಗಿ ಅಲ್ಲೇ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಗೆ ಗುದ್ದಿದ್ದು, ಬಳಿಕ ಗೇಟ್ ಬಳಿ ಇದ್ದ ಕಲ್ಲಿಗೆ ಡಿಕ್ಕಿ ಹೊಡೆದು ನಿಂತಿದೆ. ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಎಸ್ಐ ಅವರ ಕಾಲು ಮುರಿದಿದೆ ಎಂದು ತಿಳಿದು ಬಂದಿದ್ದು, ಹಾಗೂ ಮಹಿಳಾ ಸಿಬ್ಬಂದಿಯೋರ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಠಾವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.










