ಹೆತ್ತ ಮಗುವನ್ನು ಕೊಂದಿದ್ದ ಪಾಪಿ ತಂದೆಗೆ ಮರಣದಂಡನೆ ಶಿಕ್ಷೆ..!

123
First Suddi

ಗದಗ : ಒಂದೂವರೆ ವರ್ಷದ ಹೆಣ್ಣುಮಗುವನ್ನು ಕೊಂದಿದ್ದ ಪಾಪಿ ತಂದೆಗೆ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಅಪರಾಧಿ 2013 ರಲ್ಲಿ ಮುಸ್ಲಿಂ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ, ಕೆಲವು ತಿಂಗಳ ನಂತರ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡುತ್ತಿದ್ದ. ನಿತ್ಯ ಕಿರುಕುಳದಿಂದ ನೊಂದ ಪತ್ನಿ ಮಹಿಳಾ ಸಾಂತ್ವನ ಕೇಂದ್ರ ಮೊರೆ ಹೋಗಿದ್ದಳು. ಈ ವೇಳೆ ಒಂದು ಹೆಣ್ಣು ಮಗು ಜನನವಾಗಿತ್ತು. ನಂತರ ಪತ್ನಿ ಕರೆಸಿ ಬುದ್ಧಿ ಹೇಳಿದ ಬಳಿಕ ಚೆನ್ನಾಗಿ ಜೀವನ ಮಾಡುವುದಾಗಿ ತಪ್ಪೊಪ್ಪಿಕೊಂಡಿದ್ದ.
ತಪ್ಪಿನ ಅರಿವಾದ ನಂತರ ರೋಣ ಪಟ್ಟಣದ ಸಿದ್ಧಾರೂಢ ಮಠದ ಬಳಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಕೆಲವು ತಿಂಗಳ ನಂತರ ಸಾಂತ್ವನ ಕೇಂದ್ರ ಕೇಸ್ ಹಿಂಪಡೆಯುವಂತೆ ಆಗಾಗ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಆಗ ನೊಂದ ಪತ್ನಿ ಮಗುವಿಗೆ ಜೀವನಾಂಶ ಬೇಡಿ ಕೋರ್ಟ್ ಮೊರೆ ಹೋಗಿದ್ದಳು. ಆಗ ಒಂದೂವರೆ ವರ್ಷದ ಮಗುವನ್ನು ಏಪ್ರಿಲ್ 6, 2015 ರಂದು ಕಿಡ್ನ್ಯಾಪ್ ಮಾಡಿ, ಗಜೇಂದ್ರಗಡದ ಕಾಲಕಾಲೇಶ್ವರ ಬೆಟ್ಟದಲ್ಲಿ ಕತ್ತುಹಿಸುಕಿ ಕೊಂದು ಸುಟ್ಟುಹಾಕಿ ಸಾಕ್ಷಿಗಳನ್ನು ನಾಶಮಾಡಿದ್ದ.
ಗಂಡನ ಮೇಲೆ ಅನುಮಾನಗೊಂಡ ಪತ್ನಿ ರೋಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ರೋಣ ಪೊಲೀಸರು ತನಿಖೆ ನಡೆಸಿದಾಗ ಪ್ರಶಾಂತಗೌಡ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಈ ಕುರಿತು ರೋಣ ಹಾಗೂ ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಂತರ ಅಪರಾಧ ಪ್ರಕರಣ ಸಾಬೀತಾದ ಹಿನ್ನೆಲೆ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರು ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.