ದಾವಣಗೆರೆ : ಬಂದೂಕು ಸ್ವಚ್ಛ ಮಾಡುವ ವೇಳೆ ಮಿಸ್ ಫೈರಿಂಗ್ ಆಗಿ ಕಾನ್ಸ್ ಟೇಬಲ್ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಘಟನೆ ನಡೆದಿದ್ದು, ಚನ್ನಗಿರಿ ತಾಲ್ಲೂಕಿನ ಮಲಹಾಳ್ ಗ್ರಾಮದ ನಿವಾಸಿ ಚೇತನ್(28) ಮೃತ ಕಾನ್ಸ್ ಟೇಬಲ್. 2012ರಲ್ಲಿ ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದ್ದ ಚೇತನ್ ಎಂದಿನಂತೆ ಇಂದು ಶಸ್ತ್ರಾಸ್ತ್ರ ಮೀಸಲು ಪಡೆಯಲ್ಲಿ ಬಂದೂಕುಗಳನ್ನು ಸ್ವಚ್ಛಗೊಳಿಸುತ್ತಿರುವಾಗ ಆಕಸ್ಮಿಕವಾಗಿ ಬಂದೂಕಿನಿಂದ ಹೊರಬಂದ ಗುಂಡು ಕುತ್ತಿಗೆಗೆ ತಗುಲಿದೆ.
ಚೇತನ್ ಅವರನ್ನು ತುರ್ತಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಚೇತನ್ ಮದುವೆಯಾಗಿ ಐದು ವರ್ಷಗಳಾಗಿತ್ತು. ಪೂರ್ವ ವಲಯ ಐಜಿಪಿ ಎಸ್ ರವಿ, ಎಸ್ಪಿ ಸಿಬಿ ರಿಷ್ಯಂತ್ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.










